ಲೋಕಸಭಾ ಚುನಾವಣೆ “ಕೈ’ ಅಭ್ಯರ್ಥಿ ಯಾರು?
Team Udayavani, Jul 15, 2018, 12:15 PM IST
* ಉಡುಪಿಗೆ ಸೊರಕೆ, ಪ್ರಮೋದ್ ಹೆಸರು? * ಅಭ್ಯರ್ಥಿ ಹುಡುಕಾಟ ಶುರು ಮಾಡಿದ ಕಾಂಗ್ರೆಸ್
ಉಡುಪಿ: ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಸದ್ದಿಲ್ಲದೆ ಮೇಲಿಂದ ಮೇಲೆ ಸಭೆಗಳನ್ನು ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್ ಕೂಡ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದೆ. ಉಡುಪಿ ಕ್ಷೇತ್ರಕ್ಕೆ ಸಂಭಾವ್ಯ ಅಭ್ಯರ್ಥಿಗಳ ಹೆಸರಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವಿನಯಕುಮಾರ ಸೊರಕೆ ಹೆಸರು ಕೇಳಿ ಬರುತ್ತಿವೆ. ಸೊರಕೆ ಹೆಸರು ಮಂಗಳೂರು ಕ್ಷೇತ್ರಕ್ಕೂ ಅದು ಅನ್ವಯವಾಗುವ ಸಾಧ್ಯತೆ ಇದೆ.
ಸದ್ಯ ಉಡುಪಿ ಜಿಲ್ಲೆಯ 10 ಬ್ಲಾಕ್ಗಳಲ್ಲಿ ಜುಲೈ ತಿಂಗಳಲ್ಲಿ ಚುನಾವಣಾ ವಿಚಾರದಲ್ಲಿ ಸಭೆ ನಡೆಯುತ್ತಿದೆ. ಸದ್ಯ ಬರುತ್ತಿರುವುದು ನಗರ ಸಂಸ್ಥೆಗಳ ಚುನಾವಣೆಯಾದರೂ ಲೋಕಸಭೆ ಚುನಾವಣೆಯೂ ದೃಷ್ಟಿಯಲ್ಲಿದೆ. ಉಡುಪಿಯ ಎಲ್ಲ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತರೂ, ಸೋತ ಅಭ್ಯರ್ಥಿಗಳು ಮುಂದಿನ ರಾಜಕೀಯ ಜೀವನಕ್ಕೆ ಸಿದ್ಧತೆ ನಡೆಸುವುದು ಸಾಮಾನ್ಯ. ಅದರಂತೆ ಜಿಲ್ಲೆಯಲ್ಲಿ ಸಕ್ರಿಯರಾಗಿದ್ದ ಪ್ರಮೋದ್ ಮಧ್ವರಾಜ್ ಮತ್ತು ವಿನಯಕುಮಾರ ಸೊರಕೆಯವರೂ ಲೋಕಸಭಾ ಚುನಾವಣೆಗೆ ನಿಂತರೆ ಅಚ್ಚರಿ ಏನಿಲ್ಲ.
ರೋಗಿ ಬಯಸಿದ್ದೂ...
ಕಾಂಗ್ರೆಸ್ನಲ್ಲಿದ್ದು ಸಂಸದರಾದ ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿ ಸೇರಿದ ಬಳಿಕ ಕಾಂಗ್ರೆಸ್ಗೆ ಸೂಕ್ತ ಅಭ್ಯರ್ಥಿಗಳ ಕೊರತೆ ಕಾಡಿತ್ತು. ಒಂದು ವೇಳೆ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಕೊರತೆ ಮತ್ತೂ ಮುಂದುವರಿಯುತ್ತಿತ್ತು. ಈಗ ಸೋತಿದ್ದರಿಂದ ಮತ್ತು ಅಭ್ಯರ್ಥಿಗಳ ಕೊರತೆ ಇರುವ ಕಾರಣಕ್ಕೆ “ರೋಗಿ ಬಯಸಿದ್ದೂ ವೈದ್ಯ ಕೊಟ್ಟದ್ದೂ…’ ಎಂಬ ಗಾದೆ ಮಾತಿನಂತೆ ಆಗಿದೆ.
ವರ್ಕು , ನೆಟ್ವರ್ಕು ಪ್ರಯೋಜನಕ್ಕಿಲ್ಲ!
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಆರಂಭಿಸಿದ್ದೀರಾ ಎಂದು ಪ್ರಮೋದ್ ಮಧ್ವರಾಜರನ್ನು ಪ್ರಶ್ನಿಸಿದಾಗ, “ಇಲ್ಲ. ಪ್ರವಾಸವಾ? ಏಕೆ ಪ್ರವಾಸ ನಡೆಸಬೇಕು? ಚುನಾವಣೆಯಲ್ಲಿ ಆ ಹೊತ್ತಿಗೆ ಮತದಾರರ ಮನಃಸ್ಥಿತಿ ಹೇಗಿರುತ್ತದೋ ಹಾಗೆ ಫಲಿತಾಂಶ ಬರುತ್ತದೆ. ಅದಕ್ಕೆ ಹೇಳುವುದು “ಗಾಳಿ’ ಎಂದು. ವಕೂì, ನೆಟ್ವಕೂì ಪ್ರಯೋಜನಕ್ಕೆ ಬರೋದಿಲ್ಲ ಎನ್ನುವುದನ್ನು ನಾವೀಗಲೇ ನೋಡಿದ್ದೀವಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ಜತೆಗೆ ಪಕ್ಷದ ಸೂಚನೆಯಂತೆಯೇ ನಡೆಯುತ್ತೇನೆ. ಸೋಲು, ಗೆಲುವು ಮುಖ್ಯವಲ್ಲ ಎಂದಿದ್ದಾರೆ.
ಸೊರಕೆ ಮಂಗಳೂರಿಗೆ?
ವಿನಯಕುಮಾರ ಸೊರಕೆಯವರು ಉಡುಪಿಯಲ್ಲಿ ಒಮ್ಮೆ ಸಂಸದರಾಗಿ, ಕಾಪುವಿನಲ್ಲಿ ಶಾಸಕರಾದ ಹಿನ್ನೆಲೆ ಇದೆ. ಪುತ್ತೂರು ಮೂಲದವರಾಗಿರುವ ಅವರು ಅಲ್ಲೂ ಒಮ್ಮೆ ಶಾಸಕರಾಗಿದ್ದಾರೆ. ಆದ್ದರಿಂದ ಮಂಗಳೂರಿಗೆ ಅವರ ದೃಷ್ಟಿ ಇದೆ ಎನ್ನಲಾಗಿದೆ. ಜತೆಗೆ ಪ್ರಮೋದ್ ಮತ್ತು ಸೊರಕೆ ಅವರು ಪ್ರಮುಖ ಸಮುದಾಯದವರು ಮತ್ತು ಹೈಕಮಾಂಡ್ ಜತೆ ಚೆನ್ನಾಗಿದ್ದಾರೆ ಎಂಬ ಕಾರಣ ಪ್ಲಸ್ ಆಗಲಿದೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, “ಈಗ ನಡೆಯುತ್ತಿರುವ ಬ್ಲಾಕ್ ಸಭೆಗಳಲ್ಲಿ ಚರ್ಚೆ ಆಗಿದೆ. ಆಸ್ಕರ್ ಫೆರ್ನಾಂಡಿಸ್ ಮತ್ತಿತರ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಯಲಿದೆ. ಚಿಕ್ಕಮಗಳೂರು ನಾಯಕರ ಜತೆಗೂ ಮಾತುಕತೆ ನಡೆಯಬೇಕು. ಅನಂತರವೇ ಅಂತಿಮ ನಿರ್ಧಾರ’ ಎಂದಿದ್ದಾರೆ.
ಒಗ್ಗಟ್ಟಿನ ನಿರ್ಧಾರ ಮಾತ್ರ ಫಲಪ್ರದ
ಸೊರಕೆಯವರನ್ನು ಮಾತನಾಡಿಸಿದಾಗ, “ಆಸಕ್ತಿ ಎಂಬ ವಿಚಾರ ಬರುವುದಿಲ್ಲ. ನಾವು ಕರಾವಳಿಯ ಮುಖಂಡರು ಅವಿಭಜಿತ ದ.ಕ. ಜಿಲ್ಲೆಯ ಬಗ್ಗೆ ನಿರ್ಧಾರ ತಳೆಯಬೇಕು. ಹೈಕಮಾಂಡ್ ಕೂಡ ನಿರ್ಧಾರ ತಳೆಯುತ್ತದೆ. ವಿಧಾನಸಭೆಯ ಈಗಿನ ಸ್ಥಿತಿ ನೋಡಿದರೆ ನಾವು ಒಗ್ಗಟ್ಟಿನ ನಿರ್ಧಾರ ತಳೆದರೆ ಮಾತ್ರ ಪ್ರಯೋಜನವಾಗುತ್ತದೆ’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
*ಮಟಪಾಡಿ ಕುಮಾರಸ್ವಾಮಿ