ಸಂಭಾವನೆ ವಾಪಸ್ ಕೇಳಿದ್ದಕ್ಕೆ ಎಸ್ಬಿಐ ಸಿಬ್ಬಂದಿ ಗರಂ
Team Udayavani, Jul 17, 2018, 6:00 AM IST
ನವದೆಹಲಿ: ಹೆಚ್ಚುವರಿಯಾಗಿ ಕೆಲಸ ಮಾಡಿದ್ದಕ್ಕೆ ನೀಡಲಾದ ಸಂಭಾವನೆಯನ್ನು ವಾಪಸ್ ನೀಡುವಂತೆ ಕೇಳಿರುವ ಭಾರತೀಯ ಸ್ಟೇಟ್ ಬ್ಯಾಂಕ್ನ ಕ್ರಮಕ್ಕೆ 70 ಸಾವಿರಕ್ಕೂ ಅಧಿಕ ಸಿಬ್ಬಂದಿ ಗರಂ ಆಗಿದ್ದಾರೆ.
ಅಪನಗದೀಕರಣದ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿ ತೀವ್ರ ಒತ್ತಡದಲ್ಲಿ ಹೆಚ್ಚುವರಿ ಸಮಯ ಕೆಲಸ ಮಾಡ ಲೇಬೇಕಾದ ಅನಿವಾರ್ಯ ಸ್ಥಿತಿ ಇತ್ತು. ಹಳೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಉದ್ದದ ಸರತಿ ಸಾಲಿನಲ್ಲಿ ನಿಂತ ಗ್ರಾಹಕರಿಗೆ ಹೊಸ ನೋಟು ನೀಡುವ ನಿಟ್ಟಿನಲ್ಲಿ ಸಿಬ್ಬಂದಿ ರಜೆಯನ್ನೂ ಪಡೆಯದೇ ಹೆಚ್ಚಿನ ಸಮಯ ಕೆಲಸ ಮಾಡಿದ್ದರು. ಇದಕ್ಕಾಗಿ ಆಯಾ ಬ್ಯಾಂಕ್ಗಳು ಸಿಬ್ಬಂದಿಗೆ ಹೆಚ್ಚುವರಿ ಸಂಭಾವನೆ ಯನ್ನೂ ನೀಡಿವೆ.
ಎಸ್ಬಿಐ ಕೂಡ ತನ್ನ ಸಿಬ್ಬಂದಿಗೆ ಸಂಭಾವನೆ ನೀಡಿತ್ತು. ಆದರೆ, ಸಂಭಾವನೆ ನೀಡುವ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವನಂತಪುರ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ ಬ್ಯಾಂಕ್ಗಳು ಎಸ್ಬಿಐನೊಂದಿಗೆ ವಿಲೀನ ಆಗಿರಲಿಲ್ಲ. ಆದರೆ ಈಗ ಎಸ್ಬಿಐ, “ಕೇವಲ ಎಸ್ಬಿಐನಲ್ಲಿ ಕೆಲಸ ನಿರ್ವಹಿಸಿ ದವರಿಗಷ್ಟೇ ಸಂಭಾವನೆ ನೀಡಬೇಕಿತ್ತು. ಹಾಗಾಗಿ, ಉಳಿದವರೆಲ್ಲರೂ ಪಡೆದು ಕೊಂಡ ಸಂಭಾವನೆಯ ಮೊತ್ತವನ್ನು ಮರಳಿಸಬೇಕು’ ಎಂದು ಸೂಚಿಸಿದೆ. ಇದರಿಂದ ಸಿಬ್ಬಂದಿ ಆಕ್ರೋಶಗೊಂಡಿದ್ದು, ಬ್ಯಾಂಕುಗಳ ವಿಲೀನ ಎಂದರೆ, ಆಸ್ತಿ ಮತ್ತು ಹೊಣೆಗಾರಿಕೆ ಎರಡನ್ನೂ ಸ್ವಾಧೀನ ಪಡಿಸಿದಂತೆ. ಹಾಗಾಗಿ, ಸಂಭಾವನೆ ವಾಪಸ್ ಕೇಳುತ್ತಿರುವುದು ನ್ಯಾಯವಲ್ಲ ಎಂದಿದ್ದಾರೆ.