ಶಿಕ್ಷಕರ ವಿಶೇಷ ಭತ್ಯೆ ತಡೆ ಸದ್ಯಕ್ಕಿಲ್ಲ
Team Udayavani, Jul 18, 2018, 6:00 AM IST
ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕ ಹುದ್ದೆಗೆ ಬಡ್ತಿ ಹೊಂದಿದ ಶಿಕ್ಷಕರಿಗೆ ನೀಡಿದ್ದ ವಿಶೇಷ ಭತ್ಯೆ ತಡೆಹಿಡಿಯಲು ಹೊರಡಿಸಿದ್ದ ಆದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ. 2008ರ ಆಗಸ್ಟ್ 1ರ ನಂತರ ನೇಮಕಗೊಂಡ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು ಪ್ರೌಢಶಾಲೆಗೆ ಸಹ ಶಿಕ್ಷಕರಾಗಿ ಬಡ್ತಿ ಹೊಂದಿದ ಶಿಕ್ಷಕರಿಗೆ ಇಲಾಖೆಯಿಂದ ವಿಶೇಷ ಭತ್ಯೆ
ನೀಡಲಾಗುತ್ತಿತ್ತು. ಆದರೆ, ಅದನ್ನು ತಡೆಹಿಡಿ ಯುವಂತೆ 2017ರ ನ.4ರಂದು ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿತ್ತು.
ಇಲಾಖೆಯ ಕ್ರಮ ಖಂಡಿಸಿ ಶಿಕ್ಷಕರು ಮತ್ತು ಶಿಕ್ಷಕ ಸಂಘದಿಂದ ಸರ್ಕಾರ ಮೇಲೆ ಒತ್ತಡ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು, ವಿಶೇಷ ಭತ್ಯೆ ಸೇರಿ ಶಿಕ್ಷಕರ ವೇತನ ತಡೆ ಹಿಡಿಯದಂತೆ ಸೂಚಿಸಿದ್ದರು. ಅದರಂತೆ 2008ರ ಆಗಸ್ಟ್ ನಂತರ ನೇಮಕವಾಗಿ ಬಡ್ತಿ ಪಡೆದ ಶಿಕ್ಷಕರ ವಿಶೇಷ ಭತ್ಯೆ ಹಾಗೂ ವೇತನ ಕಟಾವಣೆ ಮಾಡದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.