ಕಾಶ್ಮೀರ ವಿವಾದ: ವಿಶ್ವಸಂಸ್ಥೆ ಮಧ್ಯಪ್ರವೇಶ ಅಸಾಧ್ಯ: ಪಾಕಿಗೆ ಭಾರತ
Team Udayavani, Aug 30, 2018, 4:02 PM IST
ವಾಷಿಂಗ್ಟನ್ : ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆ ಏಕೆ ಮಧ್ಯಪ್ರವೇಶಿಸುವಂತಿಲ್ಲ ಎಂಬುದನ್ನು ಭಾರತ ಪಾಕಿಸ್ಥಾನದ ಹೊಸ ಸರಕಾರಕ್ಕೆ ಮನದಟ್ಟು ಮಾಡಿಕೊಟ್ಟಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಕಾಶ್ಮೀರ ವಿಷಯವನ್ನು ಮತ್ತೆ ಎತ್ತಿರುವ ಪಾಕಿಸ್ಥಾನಕ್ಕೆ ಉತ್ತರವಾಗಿ ಭಾರತ, “ಪಾಕ್ ಹೊಸ ಸರಕಾರ ಭಾರತದ ವಿರುದ್ಧ ಅನಗತ್ಯ ವಾಕ್ಸಮರದಲ್ಲಿ ನಿರತವಾಗುವ ಬದಲು ದಕ್ಷಿಣ ಏಶ್ಯ ಪ್ರಾಂತ್ಯವನ್ನು ಭಯೋತ್ಪಾದನೆ ಮತ್ತು ಹಿಂಸೆಯಿಂದ ಪಕ್ಷಗೊಳಿಸುವ ದಿಶೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದೆ.
ಕಾಶ್ಮೀರ ವಿವಾದವನ್ನು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಬೇಕೆಂಬ ಚರ್ಚೆಯಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿಯಾಗಿರುವ, ರಾಯಭಾರಿ ಸೈಯದ್ ಅಕ್ಬರುದ್ದೀನ್ ಅವರು ಮೇಲಿನ ಕಿವಿ ಮಾತನ್ನು ನೂತನ ಪಾಕ್ ಸರಕಾರಕ್ಕೆ ಹೇಳಿದರು.
“ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ಬಗ್ಗೆ ಪಾಕಿಸ್ಥಾನದ ಪ್ರತ್ಯೇಕಿತ ನಿಯೋಗವು ಅನಪೇಕ್ಷಿತ ಹೇಳಿಕೆ ನೀಡುವ ಬದಲು ದಕ್ಷಿಣ ಏಶ್ಯದ ಈ ಭಾಗವನ್ನು ಭಯೋತ್ಪಾದನೆ ಮತ್ತು ಹಿಂಸೆಯಿಂದ ಮಕ್ತಗೊಳಿಸುವ ನಿಟ್ಟಿನಲ್ಲಿ ತನ್ನ ಆಲೋಚನೆ ಮತ್ತು ಕ್ರಿಯೆಯಲ್ಲಿ ಶಾಂತಿಯುತ ಉದ್ದೇಶವನ್ನು ತೋರಬೇಕು’ ಎಂದು ಅಕ್ಬರುದ್ದೀನ್ ವಿಶ್ವಸಂಸ್ಥೆಯಲ್ಲಿ ಪಾಕ್ ರಾಯಭಾರಿ ಮಲೀಹಾ ಲೋಧಿ ಷವರು ಕಾಶ್ಮೀರ ಉಲ್ಲೇಖ ಮಾಡಿದ ಸಂದರ್ಭದಲ್ಲಿ ಹೇಳಿದರು.