ಥಾಣೆ ಶ್ರೀ ಆದಿಶಕ್ತಿ ಕನ್ನಡ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
Team Udayavani, Sep 4, 2018, 4:45 PM IST
ಥಾಣೆ: ಶ್ರೀ ಆದಿಶಕ್ತಿ ಕನ್ನಡ ಸಂಘ ಸಂಚಾಲಿತ ಶ್ರೀ ಆದಿಶಕ್ತಿ ಕನ್ನಡ ಶಾಲೆಯಲ್ಲಿ 72ನೇ ಸ್ವಾತಂತ್ರÂ ದಿನಾಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಆ. 15ರಂದು ಶಾಲಾ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಆದಿಶಕ್ತಿ ಕನ್ನಡ ಸಂಘ ಹಾಗೂ ಶಾಲೆಯ ಅಧ್ಯಕ್ಷ ಭಾಸ್ಕರ ಎಂ. ಶೆಟ್ಟಿ ಅವರು, ಸ್ವಾತಂತ್ರÂ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸಿ, ಇಂದಿನ ವಿದ್ಯಾರ್ಥಿಗಳು ತಮ್ಮ ಪ್ರತಿಯೊಂದು ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದಾಗ ದೇಶವು ಸಮೃದ್ಧಿಯಾಗಿ ನಾವು ದೇಶ ಸೇವೆಗೆ ಹೆಗಲು ಕೊಟ್ಟಂತಾಗುತ್ತದೆ ಎಂದು ನುಡಿದರು.
ಗೌರವ ಅತಿಥಿಯಾಗಿ ಪಾಲ್ಗೊಂಡ ಉದಯ ಜೆ. ಶೆಟ್ಟಿ ಅವರು ಮಾತನಾಡಿ, ನಮ್ಮ ದೇಶವನ್ನು ರಕ್ಷಿಸುವಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸೈನಿಕರು ನಮ್ಮ ದೇಶದ ನಿಜವಾದ ನಾಯಕರು. ಅವರಿಗೆ ನಾವೆಲ್ಲರೂ ಸಹಕರಿಸಬೇಕು ಎಂದರು.
ಮತ್ತೋರ್ವ ಮುಖ್ಯ ಅತಿಥಿ, ಹೊಟೇಲ್ ಉದ್ಯಮಿ ರಾಘವ ಶೆಟ್ಟಿ ಅವರು ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ಮಾಧ್ಯಮದ ಬಗ್ಗೆ ಕೀಳರಿಮೆ ತೋರದೆ ಮಾತೃಭಾಷೆಯಲ್ಲೇ ಕಲಿತು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಗುರುತಿಸಿಕೊಂಡರೆ ಅದೊಂದು ದೊಡ್ಡ ಸಾಧನೆಯಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿ ಶುಭಹಾರೈಸಿದರು.
ಸಂಘದ ಮಾಜಿ ಅಧ್ಯಕ್ಷ ಜಯರಾಮ ಜಿ. ಶೆಟ್ಟಿ ಅವರು ಮಾತನಾಡಿ, ದೇಶದಲ್ಲಿಯ ರಾಜಕಾರಣಿಗಳ ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟು ದೇಶದ ಪ್ರಗತಿಯನ್ನು ಸಾಧಿಸುವಲ್ಲಿ ಎಲ್ಲರು ಸಹಕರಿಸಬೇಕು ಎಂದರು.
ಇನ್ನೋರ್ವ ಮಾಜಿ ಅಧ್ಯಕ್ಷ ಶಂಕರ್ ಶೆಟ್ಟಿ ಅವರು ಮಾತನಾಡಿ, ನಮ್ಮ ದೇಶದ ಬಗ್ಗೆ ಅಭಿಮಾನ ವ್ಯಕ್ತಪಡಿಸಿ, ಪ್ರತಿಯೋರ್ವ ಪ್ರಜೆ ತಮ್ಮ ಕರ್ತವ್ಯವನ್ನು ಅರಿತುಕೊಂಡು ದೇಶಕ್ಕಾಗಿ ಸತ್ಯ, ನಿಷ್ಠೆಯಿಂದ ದುಡಿಯಬೇಕು ಎಂದರು. ಸಂಘದ ರಮಾನಾಥ ಐಲ್ ಅವರು ಮಾತನಾಡಿ ಶುಭಹಾರೈಸಿದರು.
ಶಾಲೆಯ ಮಾಧ್ಯಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿಮಲಾ ಕರ್ಕೇರ ಸ್ವಾಗತಿಸಿದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಮಾಧ್ಯಮಿಕ ವಿಭಾಗದ ಸಹ ಶಿಕ್ಷಕ ಸಂತೋಷ್ ದೊಡ್ಮನಿ, ಮಮತಾ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಡೇನಿಯಲ್ ಲಸ್ರಾದೋ, ಕಿಶೋರ್ ರಾವಲ್, ದೇವರಾಜ್ ಭೋಯಿರ್, ಪದ್ಮನಾಭ ಶೆಟ್ಟಿ, ಸೀತಾರಾಮ ಶೆಟ್ಟಿ, ಚಂದ್ರಕಾಂತ್ ನಾಮ್ದಾಸ್ ಅವರು ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ವಾದಿರಾಜ್ ಶೆಟ್ಟಿ, ಕೋಶಾಧಿಕಾರಿ ಮನೋಹರ್ ಅಂಚನ್, ಜತೆ ಕಾರ್ಯದರ್ಶಿ ಹರೀಶ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರವೀಂದ್ರ ಬಿ. ಉಪಸ್ಥಿತರಿದ್ದರು. ಶಾಲಾ ಮಾಧ್ಯಮಿಕ ವಿಭಾಗದ ಸಹ ಶಿಕ್ಷಕಿ ಪ್ರಮೋದಾ ಎಸ್. ಮಾಡಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಂತೋಷ್ ದೊಡ್ಮನಿ ವಂದಿಸಿದರು.