ಲೋಕಪಾಲ ಆಯ್ಕೆ ಸಮಿತಿ ರೂಪಿಸಿದ ಕೇಂದ್ರ ಸರಕಾರ
Team Udayavani, Sep 28, 2018, 9:05 AM IST
ಹೊಸದಿಲ್ಲಿ: ಲೋಕಪಾಲಕ್ಕೆ ಮುಖ್ಯಸ್ಥರು ಹಾಗೂ ಸದಸ್ಯರನ್ನು ಶಿಫಾರಸು ಮಾಡುವುದಕ್ಕಾಗಿ ಆಯ್ಕೆ ಸಮಿತಿಯನ್ನು ಕೇಂದ್ರ ಸರಕಾರ ರೂಪಿಸಿದ್ದು, ಈ ಸಮಿತಿಗೆ ಸುಪ್ರೀಂಕೋರ್ಟ್ನ ಮಾಜಿ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಮುಖ್ಯಸ್ಥರಾಗಿರಲಿದ್ದಾರೆ. ಎಂಟು ಸದಸ್ಯರ ಈ ಸಮಿತಿಯಲ್ಲಿ ಕರ್ನಾಟಕ ಮೂಲದ, ಪ್ರಸಾರ ಭಾರತಿ ಮುಖ್ಯಸ್ಥ ಅರಕಲಗೂಡು ಸೂರ್ಯ ಪ್ರಕಾಶ್, ಎಸ್ಬಿಐ ಮಾಜಿ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ, ಇಸ್ರೋ ಮಾಜಿ ಮುಖ್ಯಸ್ಥ ಎ.ಎಸ್.ಕಿರಣ್ ಕುಮಾರ್ ಕೂಡ ಇದ್ದಾರೆ.
ಲೋಕಪಾಲ ಕಾಯ್ದೆಯಲ್ಲಿ ರೂಪಿಸಿದ ನಿಯಮಾವಳಿ ಪ್ರಕಾರವೇ ಆಯ್ಕೆ ಸಮಿತಿ ರಚಿಸಲಾಗಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಲೋಕಪಾಲ ಕಾರ್ಯರೂಪಕ್ಕೆ ಬರುವಲ್ಲಿ ಈ ಆಯ್ಕೆ ಸಮಿತಿ ಅತ್ಯಂತ ಪ್ರಮುಖವಾಗಿದ್ದು, ಶೀಘ್ರದಲ್ಲೇ ಸಮಿತಿ ಕಾರ್ಯಾಚರಣೆ ಆರಂಭಿಸಲಿದೆ ಎಂದಿದ್ದಾರೆ. ಲೋಕಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಎಲ್ಲ ಸಭೆಗಳಿಗೂ ಗೈರಾಗಿ ಆಕ್ಷೇಪವೆತ್ತಿದ್ದರೂ ಕೇಂದ್ರ ಸರಕಾರ ಶೋಧ ಸಮಿತಿಯನ್ನು ರಚನೆ ಮಾಡಿದೆ. ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷದ ಮುಖ್ಯಸ್ಥರು ಲೋಕಪಾಲ ರಚನೆ ಸಭೆಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡುವಂತೆ ಕಾನೂನು ತಿದ್ದುಪಡಿ ತರಲು ಖರ್ಗೆ ಆಗ್ರಹಿಸಿದ್ದರು.
ಯಾರಿದ್ದಾರೆ ಸಮಿತಿಯಲ್ಲಿ?: ಅಲಹಾಬಾದ್ ಹೈಕೋರ್ಟ್ನ ನಿವೃತ್ತ ಜಡ್ಜ್ ಸಖಾ ರಾಮ ಸಿಂಗ್ ಯಾದವ್, ಗುಜರಾತ್ ಪೊಲೀಸ್ ಮಾಜಿ ಮುಖ್ಯಸ್ಥ ಶಬ್ಬೀರ್ಹುಸೇನ್ ಎಸ್ ಖಂಡ್ವಾವಾಲ, ರಾಜಸ್ಥಾನ ಕೇಡರ್ನ ನಿವೃತ್ತ ಐಎಎಸ್ ಅಧಿಕಾರಿ ಲಲಿತ್ ಕೆ ಪನ್ವಾರ್ ಹಾಗೂ ರಂಜಿತ್ ಕುಮಾರ್ ಸಮಿತಿಯ ಸದಸ್ಯರಾಗಿದ್ದಾರೆ.