ಸಮಯಪ್ರಜ್ಞೆಯಿಂದ ಬಚಾವಾದ ಪ್ರವಾಸಿಗರು
Team Udayavani, Oct 3, 2018, 3:05 AM IST
ಸೇಲಂ: ತಮಿಳುನಾಡಿನ ಸೇಲಂನಲ್ಲಿರುವ ಅನೈವರಿ ಜಲಪಾತಕ್ಕೆ ಪಿಕ್ನಿಕ್ಗೆ ತೆರಳಿದ್ದ ಸುಮಾರು 200 ಮಂದಿ ಪ್ರವಾಸಿಗರು ಸಮಯಪ್ರಜ್ಞೆಯಿಂದಾಗಿ ಪ್ರವಾಹದಿಂದ ಬಚಾವಾಗಿದ್ದಾರೆ.
ನೀರಿನ ರಭಸ ಹೆಚ್ಚುತ್ತಿದ್ದಂತೆಯೇ ಮಾನವ ಸರಪಣಿ ರಚಿಸಿ ಎಲ್ಲರೂ ಬಚಾವಾಗಿದ್ದಾರೆ. ಈ ಪೈಕಿ 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಜಾದಿನವಾಗಿದ್ದರಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಹಠಾತ್ತನೆ ನೀರು ಏರಿ ಮಂಡಿಯೆತ್ತರಕ್ಕೆ ಬರುತ್ತಿದ್ದಂತೆಯೇ ಭೀತಿಯಿಂದ ಕೂಗಿಕೊಂಡರು. ಆದರೆ ಈ ಪೈಕಿ ಕೆಲವರ ಮುಂಜಾಗ್ರತೆಯಿಂದ ಎಲ್ಲರೂ ಕೈ ಕೈ ಹಿಡಿದುಕೊಂಡು ನೀರಿನ ರಭಸಕ್ಕೆ ಕೊಚ್ಚಿಹೋಗದಂತೆ ರಕ್ಷಿಸಿಕೊಂಡರು. ಇನ್ನು ಕೆಲವರು ಬಳಿಯಿದ್ದ ಬಂಡೆಯನ್ನು ಅಪ್ಪಿ ಹಿಡಿದು ರಕ್ಷಣೆ ಪಡೆದರು. ನೀರಿನ ಪ್ರಮಾಣ ಇಳಿದ ಅನಂತರ ಎಲ್ಲರೂ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.