ರಕ್ಷಿತ್ ಬಗ್ಗೆ ಜಗ್ಗೇಶ್ ಹೇಳಿದ್ದೇನು ಗೊತ್ತಾ?
Team Udayavani, Oct 6, 2018, 2:24 PM IST
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನವರಸನಾಯಕ ಜಗ್ಗೇಶ್ ಇದ್ದಕ್ಕಿದ್ದಂತೆ ತಮ್ಮ ಟ್ವೀಟರ್ ಖಾತೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಗ್ಗೆ ಒಂದಷ್ಟು ಸಾಲುಗಳನ್ನು ಬರೆಯುವುದರ ಜೊತೆಗೆ ರಕ್ಷಿತ್ ಅಂದ್ರೆ ನನಗೆ ಸ್ವಂತ ಮಗನಷ್ಟೇ ಪ್ರೀತಿ ಎಂದು ಹೇಳಿದ್ದಾರೆ. ಹೌದು! ಶುಕ್ರವಾರ ರಾತ್ರಿ ಜಗ್ಗೇಶ್ ,ರಕ್ಷಿತ್ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿ ಮೆಚ್ಚುಗೆಯ ಟ್ವೀಟ್ ಮಾಡಿದ್ದಾರೆ.
“ನಾನು ಕಂಡ ಅದ್ಭುತ ಸಜ್ಜನಿಕೆಯ ಕಲಾಬಂಧು. ಸದಾ ಸಿನಿಮಾಗಾಗಿ ತುಡಿಯುವ ಕಲಾತಪಸ್ವಿ. ಇವನಿಗೆ ದೇವರ ದಯೆಯಿಂದ ಇನ್ನೂ ಎತ್ತರದ ದಿನಗಳು ಕಾದಿದೆ ಎಂದು ನನ್ನ ಮನ ಹೇಳಿತು. ನಮ್ಮ ಯಶಸ್ಸು ಕಬಳಿಸಿ ಮೇಲೇರಲು ಅನೇಕರು ಮುಖವಾಡ ಹಾಕಿ ಬರುತ್ತಾರೆ. ಇದು ಪ್ರಾಪಂಚಿಕ ವಾಮಮಾರ್ಗ ತಂತ್ರ. ಇಂಥವರನ್ನು ನಗುತ್ತಾ ಪಕ್ಕ ತಳ್ಳುವ ಕಲೆ ಕರಗತವಾಗಲಿ ಮುಂದೆ ಎಂದು ಹೇಳುತ್ತಾ ಶುಭರಾತ್ರಿ, ಸವಿಗನಸು ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ’.
ಅಲ್ಲದೇ ಮುಖ್ಯವಾಗಿ ಜಗ್ಗೇಶ್ ತಮ್ಮ ಟ್ವೀಟ್ನಲ್ಲಿ “ನಮ್ಮ ಯಶಸ್ಸು ಕಬಳಿಸಿ ಮೇಲೇರಲು ಅನೇಕರು ಮುಖವಾಡ ಹಾಕಿ ಬರುತ್ತಾರೆ’ ಎಂದು ಹೇಳಿದ್ದಾರೆ. ಈ ಮಾತು ಈಗೇಕೆ ಹೇಳಿದ್ರು ಎಂಬ ಅನುಮಾನ ಕೂಡಾ ಮೂಡಿದೆ.
ಈ ಟ್ವೀಟ್ಗೆ ಅಭಿಮಾನಿಗಳಿಂದ ತರಹೇವಾರಿ ರೀ-ಟ್ವೀಟ್ಗಳು ಬಂದಿದ್ದು, ಈ ವೇಳೆ ಅಭಿಮಾನಿಯೊಬ್ಬರು ನಿಮಗೆ ರಕ್ಷಿತ್ ಮೇಲೆ ಅಷ್ಟೊಂದು ಲವ್ ಏಕೆ ಎಂದು ಕೇಳಿದಾಗ ಅದಕ್ಕೆ ಜಗ್ಗೇಶ್ ನನ್ನ ಮಗನಷ್ಟೆ ರಕ್ಷಿತ್ನನ್ನು ಪ್ರೀತಿಸುವೆ ಎಂದು ಹೇಳಿದ್ದಾರೆ. ಈ ಹಿಂದೆ 2015ರಲ್ಲಿ ತೆರೆಕಂಡ ಯೋಗರಾಜ್ ಭಟ್ ನಿರ್ದೇಶನದ “ವಾಸ್ತು ಪ್ರಕಾರ’ ಚಿತ್ರದಲ್ಲಿ ರಕ್ಷಿತ್ ಚಿಕ್ಕಪ್ಪನ ಪಾತ್ರದಲ್ಲಿ ಜಗ್ಗೇಶ್ ನಟಿಸಿದ್ದರು.