ಬ್ಯಾಂಕ್ ಗೆ ನುಗ್ಗಿದ ದರೋಡೆಕೋರರು; 3 ಲಕ್ಷ ಲೂಟಿ, ಕ್ಯಾಶಿಯರ್ ಹತ್ಯೆ
Team Udayavani, Oct 13, 2018, 3:20 PM IST
ನವದೆಹಲಿ:ಆರು ಮಂದಿ ಮುಸುಕುಧಾರಿ ಸಶಸ್ತ್ರ ದರೋಡೆಕೋರರು ಬ್ಯಾಂಕ್ ಗೆ ನುಗ್ಗಿ, ಮೂರು ಲಕ್ಷ ರೂಪಾಯಿ ನಗದನ್ನು ದೋಚಿ, ಕ್ಯಾಶಿಯರ್ ಗೆ ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿರುವ ಘಟನೆ ನವದೆಹಲಿಯಲ್ಲಿ ಶುಕ್ರವಾರ ನಡೆದಿದೆ.
ಈ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, 90 ಸೆಕೆಂಡ್ಸ್ ಗಳ ವಿಡಿಯೋದಲ್ಲಿ, ದರೋಡೆಕೋರರು ಭದ್ರತಾ ಸಿಬ್ಬಂದಿಯ ಕೈಯಲ್ಲಿದ್ದ ರೈಫಲ್ ಅನ್ನು ಕಸಿದುಕೊಂಡು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ನಂತರ ಬ್ಯಾಂಕ್ ಕ್ಯಾಶಿಯರ್ ಮೇಲೆ ಗುಂಡಿನ ದಾಳಿ ನಡೆಸಿ, ಮೂರು ಲಕ್ಷ ರೂಪಾಯಿ ಹಣದೊಂದಿಗೆ ಪರಾರಿಯಾಗಿರುವುದು ದಾಖಲಾಗಿದೆ.
ದೆಹಲಿಯ ಚಾವ್ಲಾ ನಗರದಲ್ಲಿರುವ ಖಾಸಗಿ ಬ್ಯಾಂಕ್ ವೊಂದರಲ್ಲಿ ನಡೆದಿದೆ. ದೇಶದ ರಾಜಧಾನಿಯಲ್ಲಿ ದಶಕಗಳ ನಂತರ ಬ್ಯಾಂಕ್ ದರೋಡೆ ಪ್ರಕರಣ ನಡೆದಿದೆ ಎಂದು ವರದಿ ತಿಳಿಸಿದೆ.
ಬ್ಯಾಂಕ್ ಗೆ ನುಗ್ಗಿದ್ದ ದರೋಡೆಕೋರರು 10 ಜನ ಗ್ರಾಹಕರು ಮತ್ತು 6 ಮಂದಿ ಬ್ಯಾಂಕ್ ಸಿಬ್ಬಂದಿ ಸೇರಿ 16 ಜನರನ್ನು ಗನ್ ಪಾಯಿಂಟ್ ನಲ್ಲಿ ಬೆದರಿಸಿ ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದರು. ಮೊದಲು ಬ್ಯಾಂಕ್ ಕ್ಯಾಶಿಯರ್ ಬಳಿ ಇದ್ದ ಹಣವನ್ನು ಕಸಿಯಲು ಯತ್ನಿಸಿದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಕ್ಯಾಶಿಯರ್ ಗೆ ಗುಂಡು ಹಾರಿಸಿದ್ದರು. ತದನಂತರ ಕ್ಯಾಶಿಯರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಕೂಡಾ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.