ಎನ್ಐಎ ತನಿಖೆ ವೇಳೆ ಬಹಿರಂಗ
Team Udayavani, Oct 16, 2018, 6:00 AM IST
ನವದೆಹಲಿ: ಭಯೋತ್ಪಾದಕ ಹಫೀಜ್ ಸಯೀದ್ನ ಲಷ್ಕರ್-ಎ-ತೊಯ್ಬಾ ಸಂಘಟನೆ ಭಾರತದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವುದು ಮಾತ್ರವಲ್ಲ ಮಸೀದಿ ನಿರ್ಮಾಣಕ್ಕೂ ಹಣಕಾಸಿನ ನೆರವು ನೀಡಿದ ವಿಚಾರ ಬಹಿರಂಗವಾಗಿದೆ. ಹರ್ಯಾಣದ ಉತ್ತಾವರ್ ಗ್ರಾಮದಲ್ಲಿ ನಿರ್ಮಿಸಲಾಗಿರುವ ಮಸೀದಿಯನ್ನು ಲಷ್ಕರ್-ಎ-ತೊಯ್ಬಾ ನೀಡಿದ ಹಣಕಾಸಿನ ನೆರವಿನಿಂದ ನಿರ್ಮಿಸಲಾಗಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸಿದ ತನಿಖೆಯಲ್ಲಿ ಬಯಲಾಗಿದೆ.
ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿರುವ ಉತ್ತಾವರ್ ಗಾಮದಲ್ಲಿ ನಿರ್ಮಿಸಲಾಗಿರುವ ಖುಲಾಫಾ- ಎ-ರಶಿದೀನ್ ಎಂಬ ಹೆಸರಿನ ಮಸೀದಿಯಲ್ಲಿ ಎನ್ಐಎ ಶೋಧ ಕಾರ್ಯ ನಡೆಸಿತ್ತು. ಅದಕ್ಕಿಂತ ಮೊದಲು ಸೆ.26ರಂದು ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿ ನವದೆಹಲಿಯಲ್ಲಿ ಉತ್ತಾವರ್ ಗ್ರಾಮದ ಮಸೀದಿಯ ಇಮಾಮ್ ಮೊಹಮ್ಮದ್ ಸಲ್ಮಾನ್ ಮತ್ತು ಇತರ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬಳಿಕ ಈ ಅಂಶ ಬಯಲಾಗಿದೆ ಎಂದು “ದ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಸ್ಥಳೀಯರು ಹೇಳುವಂತೆ ಮಸೀದಿ ನಿರ್ಮಿಸಲಾಗಿರುವ ಜಮೀನು ವಿವಾದದಲ್ಲಿತ್ತು. ಉಗ್ರ ಸಂಘಟನೆ ಮತ್ತು ಇಮಾಮ್ ನಡುವಿನ ಲಿಂಕ್ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಮಸೀದಿಯ ಆಡಳಿತ ಮಂಡಳಿ ಸದಸ್ಯರನ್ನು ಮತ್ತು ಅದಕ್ಕೆ ಸಿಕ್ಕಿದ ದೇಣಿಗೆ, ಖರ್ಚು ವೆಚ್ಚದ ಪುಸ್ತಕಗಳನ್ನು ಎನ್ಐಎ ಪರಿಶೀಲಿಸಿದೆ.
ಎನ್ಐಎ ಮೂಲಗಳು ಹೇಳುವ ಪ್ರಕಾರ ಮೊಹಮ್ಮದ್ ಸಲ್ಮಾನ್ ದುಬೈನಲ್ಲಿದ್ದಾಗ ಲಷ್ಕರ್ ಸಂಘಟನೆಗೆ ಸಂಪರ್ಕ ಇರುವ ವ್ಯಕ್ತಿಗಳ ಜತೆಗೆ ಪರಿಚಯವಾಯಿತು. ಸಲ್ಮಾನ್ ಮತ್ತು ಇತರ ಇಬ್ಬರಿಗೆ ಲಾಹೋರ್ ಮೂಲದ ಫಲಾ-ಇ-ಇನ್ಸಾಯಿತ್ ಫೌಂಡೇಷನ್ (ಎಫ್ಐಎಫ್) ಮೂಲಕ ಹಣಕಾಸಿನ ನರೆವು ಬರುತ್ತಿತ್ತು. ಈ ಸಂಘಟನೆಯನ್ನು ಉಗ್ರ ಹಫೀಜ್ ಸಯೀದ್ನ ಜಮಾತ್-ಉದ್-ದಾವಾ ಸಂಘಟನೆ ಸ್ಥಾಪಿಸಿದೆ.
ತನಿಖೆ ವೇಳೆ ಎಫ್ಐಎಫ್ ಸಂಘಟನೆ ಮೂಲಕ ಮಸೀದಿ ನಿರ್ಮಾಣಕ್ಕೆ 70 ಲಕ್ಷ ರೂ. ಹಣಕಾಸಿನ ನೆರವು ಸಿಕ್ಕಿದೆ. ಇದೀಗ ಯಾವ ಮೂಲಗಳಿಂದ ಹಣ ಬಂದಿದೆ ಮತ್ತು ಅದನ್ನು ಯಾವುದಕ್ಕೆ ಬಳಕೆಯಾಗಿದೆ ಎಂಬ ಬಗ್ಗ ತನಿಖೆಗೆ ಎನ್ಐಎ ಮುಂದಾಗಿದೆ. ಆದರೆ ಮಸೀದಿಯ ಹಾಲಿ ಇಮಾಮ್ ಮೊಹಮ್ಮದ್ ಜಮ್ಶೆಡ್ ಆರೋಪ ನಿರಾಕರಿಸಿದ್ದಾರೆ. ಜತೆಗೆ ದಿನವಹಿ ಲೆಕ್ಕಾಚಾರಗಳ ವಿವರಗಳನ್ನೂ ತನಿಖೆ ವೇಳೆ ಪ್ರದರ್ಶಿಸಿದ್ದಾರೆ.
ಸೆ.26ರಂದು ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡಿಕೆ ಬಗ್ಗೆ ಮೂವರ ಬಂಧನ
ಹರ್ಯಾಣದಲ್ಲಿ ಉಗ್ರರ ನೆರವಿನಿಂದ ಮಸೀದಿ ನಿರ್ಮಾಣ
ದೇಣಿಗೆ, ಖರ್ಚು ವೆಚ್ಚವನ್ನು ಪರಿಶೀಲಿಸಿದ ಎನ್ಐಎ
ಲಾಹೋರ್ ಮೂಲದ ಫೌಂಡೇಶನ್ನಿಂದ ಹಣ ರವಾನೆ