ದತ್ತಮಾಲಾ ಅಭಿಯಾನ ಮಂಗಳೂರಿನಿಂದ 1,500 ಕಾರ್ಯಕರ್ತರು
Team Udayavani, Oct 26, 2018, 9:36 AM IST
ಮಂಗಳೂರು: ದತ್ತಮಾಲಾ ಅಭಿಯಾನ ಆರಂಭವಾಗಿದ್ದು ಚಿಕ್ಕಮಗಳೂರಿನಲ್ಲಿ ಅ. 28ರಂದು ನಡೆಯಲಿರುವ ಬೃಹತ್ ಶೋಭಾಯಾತ್ರೆಯಲ್ಲಿ ಮಂಗಳೂರಿನಿಂದ ಸುಮಾರು 1,500 ಶ್ರೀರಾಮಸೇನೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ತಿಳಿಸಿದ್ದಾರೆ.
ಅ. 27ರಂದು ರಾತ್ರಿ 9.30ಕ್ಕೆ ಮಂಗಳೂರಿನ ಕದ್ರಿ ಮೈದಾನದಿಂದ ಕಾರ್ಯಕರ್ತರು ಚಿಕ್ಕಮಗಳೂರಿಗೆ ತೆರಳಲಿದ್ದಾರೆ. 28ರಂದು ಚಿಕ್ಕಮಗಳೂರಿನಲ್ಲಿ ಬೃಹತ್ ಶೋಭಾಯಾತ್ರೆಯ ಬಳಿಕ ಚಂದ್ರದ್ರೋಣ ಪರ್ವತಕ್ಕೆ ತೆರಳಿ ದತ್ತ ಪಾದುಕೆ ಪೂಜೆ ನಡೆಯಲಿದೆ.
ಈ ಬಗ್ಗೆ ಶ್ರೀರಾಮ ಸೇನೆ ರಾಜ್ಯಾದ್ಯಂತ ವಿಶೇಷ ಆಂದೋಲನ ಕೈಗೊಂಡಿದ್ದು, ಗುರುವಾರ ಮಂಗಳೂರು ಜಿಲ್ಲಾ ಕೇಂದ್ರದ ಕಾರ್ಸ್ಟ್ರೀಟ್ನ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಬೆಳಗ್ಗೆ ದತ್ತ ಸಂಕೀರ್ತನೆ ನಡೆದು ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗಿದೆ ಎಂದು ಶ್ರೀರಾಮ ಸೇನೆಯ ವಿಭಾಗ ಅಧ್ಯಕ್ಷ ಜೀವನ್ ನೀರುಮಾರ್ಗ ಹಾಗೂ ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.