ವೈಭವ್ ಕಣ್ತುಂಬ ಕನಸು
Team Udayavani, Nov 14, 2018, 11:13 AM IST
ಇತ್ತೀಚೆಗೆ ಚಂದನವನದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ “ತಾರಕಾಸುರ’. ಹೆಸರೇ ಹೇಳುವಂತೆ “ತಾರಕಾಸುರ’ ಕಮರ್ಷಿಯಲ್ ಆ್ಯಕ್ಷನ್ ಕಹಾನಿ. ಈ ಚಿತ್ರದ ಮೂಲಕ ನವನಟ ವೈಭವ್ ಆ್ಯಕ್ಷನ್ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಈಗಾಗಲೇ “ತಾರಕಾಸುರ’ ಚಿತ್ರದ ಪೋಸ್ಟರ್, ಟೀಸರ್, ಹಾಡುಗಳು ಮತ್ತು ಟ್ರೇಲರ್ಗಳು ನೋಡುಗರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಚಿತ್ರಕ್ಕೆ ಪ್ರೇಕ್ಷಕರು ಮತ್ತು ಚಿತ್ರರಂಗದ ಕಡೆಯಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಆದಷ್ಟು ಬೇಗ “ತಾರಕಾಸುರ’ನನ್ನು ಚಿತ್ರಮಂದಿರಗಳಿಗೆ ತರುವ ಸಿದ್ಧತೆ ಮಾಡಿಕೊಳ್ಳುತ್ತಿದೆ.
“ತಾರಕಾಸುರ ಚಿತ್ರಕ್ಕೆ ಸುಮಾರು ಎರಡು ವರ್ಷಗಳ ಸುದೀರ್ಘ ಸಮಯವನ್ನು ತೆಗೆದುಕೊಂಡಿದ್ದೆವು. ಚಿತ್ರರಂಗದಲ್ಲಿ ಅನೇಕರು ಇಷ್ಟೊಂದು ಸಮಯವನ್ನು ಯಾಕೆ ತೆಗೆದುಕೊಂಡಿದ್ದು? ಎಂದು ಕೇಳುತ್ತಿದ್ದರು. ಅವರ ಎಲ್ಲಾ ಪ್ರಶ್ನೆಗಳಿಗೆ ಚಿತ್ರದ ಟ್ರೇಲರ್ ಉತ್ತರ ನೀಡಿದೆ. ಉಳಿದ ಪ್ರಶ್ನೆಗಳಿಗೆ ಚಿತ್ರ ತೆರೆಗೆ ಬಂದ ನಂತರ ಉತ್ತರ ಸಿಗುತ್ತದೆ’ ಎನ್ನುವುದು ಚಿತ್ರದ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅವರ ಮಾತು.
“ಯಾವುದೇ ಚಿತ್ರವನ್ನಾದರೂ ಮಾಡಲು ಒಂದಷ್ಟು ಸಮಯ ಬೇಕೆ ಬೇಕು. ಇನ್ನು ಕೆಲವು ಚಿತ್ರಗಳನ್ನು ಮಾಡುವಾಗ ಅಂದುಕೊಂಡಿದ್ದಕ್ಕಿಂತ ಜಾಸ್ತಿಯೇ ಸಮಯ ಬೇಕು. ಅದರಲ್ಲೂ ಹೊಸ ಕಥೆಯನ್ನು ಚಿತ್ರವಾಗಿ ಮಾಡಲು ಹೊರಟಾಗ, ಅದಕ್ಕೆ ಸಾಕಷ್ಟು ಅಧ್ಯಯನ, ಸಂಶೋಧನೆ, ಹೋಮ್ ವರ್ಕ್ ಎಲ್ಲವೂ ಬೇಕಾಗುತ್ತದೆ. ತಾರಕಾಸುರ ಅಂಥ ಕೆಟಗೆರಿಗೆ ಸೇರುವ ಚಿತ್ರ’ ಎನ್ನುವ ಚಂದ್ರಶೇಖರ್ ಬಂಡಿಯಪ್ಪ, “ನಾವು ಸ್ಕ್ರಿಪ್ಟ್ ಹಂತದಲ್ಲಿ ಚಿತ್ರ ಹೇಗೆ ಬರಬೇಕು ಅಂದುಕೊಂಡಿದ್ದೆವೊ, ಹಾಗೇ ತೆರೆಮೇಲೆ ಬಂದಿದೆ. ಚಿತ್ರ ತೆರೆಗೆ ಬರೋದಕ್ಕೆ ಸ್ವಲ್ಪ ತಡವಾದರೂ ಅದಕ್ಕೆ ಒಂದಷ್ಟು ಸಕಾರಣಗಳಿವೆ’ ಎನ್ನುತ್ತಾರೆ.
“ತಾರಕಾಸುರ’ ಚಿತ್ರದಲ್ಲಿ ನವನಟ ವೈಭವ್ಗೆ ನಾಯಕಿಯಾಗಿ ಮಾನ್ವಿತಾ ಹರೀಶ್ ಜೋಡಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಹಾಲಿವುಡ್ ನಟ ಡ್ಯಾನಿ ಸಫಾನಿ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಉಳಿದಂತೆ ಸಾಧುಕೋಕಿಲ, ಕರಿಸುಬ್ಬು, ಎಂ.ಕೆ ಮಠ, ಜೈಜಗದೀಶ್ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಬೆಂಗಳೂರು, ಮೈಸೂರು, ಚಾಮರಾಜನಗರ, ಕೊಳ್ಳೇಗಾಲ, ಮದ್ದೂರು, ವಾರಣಾಸಿ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಹಾಡುಗಳಿಗೆ ಧರ್ಮವಿಶ್ ಸಂಗೀತ ಸಂಯೋಜಿಸಿದ್ದಾರೆ.
ಹಾಡುಗಳು ಹಿಟ್: ಇನ್ನು ಇತ್ತೀಚೆಗೆ ಬಿಡುಗಡೆಯಾಗಿರುವ “ತಾರಕಾಸುರ’ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ಅದರಲ್ಲೂ ನಟ ಶಿವರಾಜಕುಮಾರ್ ಹಾಡಿರುವ ಹಾಡಂತೂ ವೈರಲ್ ಆಗುತ್ತಿದೆ. ಈಗಾಗಲೇ ನಿರ್ದೇಶಕರಾದ ಸೂರಿ, ಸಂತೋಷ್ ಆನಂದರಾಮ್, ಸುನಿ, ರಿಷಭ್ ಶೆಟ್ಟಿ, ನಟ ಶ್ರೀ ಮುರಳಿ ಹೀಗೆ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಟ್ರೇಲರ್ ಹಾಡುಗಳನ್ನು ನೋಡಿ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಈ ವರ್ಷದ ಹಿಟ್ ಹಾಡುಗಳ ಪಟ್ಟಿಯಲ್ಲಿ ನಮ್ಮ ಚಿತ್ರದ ಹಾಡುಗಳೂ ಸ್ಥಾನ ಪಡೆದುಕೊಂಡಿವೆ. ಹೆಸರೇ ಹೇಳುವಂತೆ “ತಾರಕಾಸುರ’ ಒಂದು ಆ್ಯಕ್ಷನ್ ಸಿನಿಮಾ. ಆದರೆ ಕನ್ನಡದ ಆ್ಯಕ್ಷನ್ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಲಾಗದ ಹತ್ತಾರು ಸಂಗತಿಗಳು ಈ ಚಿತ್ರದಲ್ಲಿರುತ್ತವೆ. ಒಳ್ಳೆಯ ಕಥೆ, ಹಾಡುಗಳು, ಮನರಂಜನೆಯ ಅಂಶಗಳ ಜೊತೆಗೆ ಗಂಭೀರವಾದ ವಿಷಯವೊಂದನ್ನು ಚಿತ್ರ ಚರ್ಚಿಸಲಿದೆ ಎನ್ನುತ್ತದೆ ಚಿತ್ರತಂಡ.
ಕಳೆದ ಮೂರುವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಪ್ರದರ್ಶಕರಾಗಿ, ವಿತರಕರಾಗಿ ಸಕ್ರಿಯವಾಗಿರುವ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಯಾಗಿದ್ದ ಎಂ. ನರಸಿಂಹಲು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ತಾರಕಾಸುರ’ ಚಿತ್ರದ ಬಿಡುಗಡೆಯ ಹೊಣೆಯನ್ನು ವಿತರಕ ಜಾಕ್ ಮಂಜು ವಹಿಸಿಕೊಂಡಿದ್ದು, ಚಿತ್ರವನ್ನು ಇದೇ ತಿಂಗಳಾಂತ್ಯಕ್ಕೆ ರಾಜ್ಯದಾದ್ಯಂತ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಇನ್ನು, “ತಾರಕಾಸುರ’ ಚಿತ್ರದ ಕಥಾ ಹಂದರ ಕೂಡ, ಹೊಸ ಮುಖದ ನಾಯಕನನ್ನು ಬಯಸುತ್ತಿದ್ದು, ಅದೇ ಹುಡುಕಾಟದಲ್ಲಿದ್ದ ಚಂದ್ರಶೇಖರ್ ಬಂಡಿಯಪ್ಪ ಅವರ ಕಣ್ಣಿಗೆ ಬಿದ್ದಿದ್ದು ನಿರ್ಮಾಪಕ ನರಸಿಂಹಲು ಅವರ ಪುತ್ರ ವೈಭವ್. ಆಗಷ್ಟೆ ವೈಭವ್ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿ, ನಟನಾಗುವ ಸಲುವಾಗಿ ಒಂದಷ್ಟು ತಯಾರಿ, ಕಸರತ್ತನ್ನು ಆರಂಭಿಸಿದ್ದರು. ಚಿತ್ರದ ಕಥೆಗೂ ಹೊಂದಾಣಿಕೆಯಾಗುತ್ತಿದ್ದರಿಂದ, “ಈ ಚಿತ್ರದಲ್ಲಿ ವೈಭವ್ನನ್ನೆ ನಾಯಕ ನಟನನ್ನಾಗಿ ಮಾಡಿದರೆ ಹೇಗೆ?’ ಎಂಬ ಪ್ರಸ್ತಾಪವನ್ನು ನಿರ್ಮಾಪಕರ ಮುಂದಿಟ್ಟರು ನಿರ್ದೇಶಕರು.
“ನಿರ್ಮಾಪಕರ ಮಗ ಎಂಬ ಮುಲಾಜಿಗೆ ಮಣಿದು ವೈಭವ್ನನ್ನು ಈ ಸಿನಿಮಾಕ್ಕೆ ಹೀರೋ ಆಗಿ ಹಾಕಿಕೊಳ್ಳುವುದು ಬೇಡ. ನಿಜಕ್ಕೂ ನಿಮ್ಮ ಕಥೆಗೆ ವೈಭವ್ ಹೊಂದಿಕೆಯಾಗುತ್ತಾನೆ ಎಂಬುದಿದ್ದರೆ ಮಾತ್ರ ಅವನನ್ನು ಹಾಕಿಕೊಳ್ಳಿ. ಇಲ್ಲದಿದ್ದರೆ ಈ ಕಥೆಗೆ ಹೊಂದಾಣಿಕೆಯಾಗುವ ಬೇರೆ ಯಾವುದಾದರೂ ನಾಯಕ ನಟನ್ನು ನೋಡಿ’ ಎಂಬ ಉತ್ತರ ನಿರ್ಮಾಪಕ ನರಸಿಂಹಲು ಅವರಿಂದ ಬಂತು. ಕೊನೆಗೆ ಇಡೀ ತಂಡ ಕೂತು ಚರ್ಚಿಸಿ ವೈಭವ್ ಅವರನ್ನೆ ಸಿನಿಮಾದ ನಾಯಕ ನಟನಾಗಿ ಆಯ್ಕೆ ಮಾಡಿದ್ದಾರೆ. ಅದರಂತೆ ವೈಭವ್ ಕೂಡಾ ಪಾತ್ರಕ್ಕೆ ಬೇಕಾದ ಪೂರ್ವ ತಯಾರಿ ನಡೆಸಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಗಟ್ಟಿ ಕಥಾಹಂದರ: ಚಿತ್ರವನ್ನು ಹಿರಿಯ ನಿರ್ಮಾಪಕ, ಪ್ರದರ್ಶಕ ನರಸಿಂಹಲು ನಿರ್ಮಿಸಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವ ಅವರಿಗೆ ಸಿನಿಮಾ ಬಗ್ಗೆ ವಿಶ್ವಾಸವಿದೆ. ಸುಮಾರು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. “ಸಿನಿಮಾ ನೋಡಿದ್ದೇನೆ. ತುಂಬಾ ಚೆನ್ನಾಗಿ ಬಂದಿದೆ. ಮುಖ್ಯವಾಗಿ ಈ ಚಿತ್ರದ ಕಥಾವಸ್ತು ಭಿನ್ನವಾಗಿದೆ. ಚಿತ್ರದ ಕಥಾವಸ್ತು ಗಟ್ಟಿಯಾಗಿದ್ದರೆ ಜನ ಸಿನಿಮಾವನ್ನು ಇಷ್ಟಪಡುತ್ತಾರೆಂಬುದನ್ನು ಇಷ್ಟು ವರ್ಷದ ಅನುಭವದಲ್ಲಿ ಕಂಡುಕೊಂಡಿದ್ದೇನೆ. “ತಾರಕಾಸುರ’ದಲ್ಲಿ ಆ ಗುಣ ಇದೆ. ಅಂತಿಮವಾಗಿ ಪ್ರೇಕ್ಷಕರು ಏನು ಹೇಳುತ್ತಾರೆ ಅನ್ನೋದಷ್ಟೇ ಮುಖ್ಯವಾಗುತ್ತದೆ’ ಎನ್ನುವುದು ಅವರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ
Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು
Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ
Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ