ಎಲ್ಲರಿಗೂ ಕಾನೂನು ಅರಿವು ಅವಶ್ಯಕ
Team Udayavani, Nov 15, 2018, 12:18 PM IST
ದೇವನಹಳ್ಳಿ: ಪ್ರತಿ ಜನರಿಗೂ ಕಾನೂನು ಅರಿವು ಕಾರ್ಯಕ್ರಮ ತಲುಪಿದರೆ ಅನೇಕ ಸೌಲಭ್ಯಗಳ ಕುರಿತು ಮಾಹಿತಿ ತಿಳಿಯುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸುನಿಲ್ ಹೊಸಮನಿ ತಿಳಿಸಿದರು.
ತಾಲೂಕಿನ ಚನ್ನ ಹಳ್ಳಿ ಗ್ರಾಮದ ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಸೇವೆಗಳ ಪ್ರಾಧಿಕಾರ, ತಾಲೂಕು ವಕೀಲರ ಸಂಘ, ಚನ್ನಹಳ್ಳಿ ಗ್ರಾಪಂ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವತಿಯಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಲ್ಯ ವಿವಾಹ ನಡೆದರೆ ಮಾಹಿತಿ ಕೊಡಿ: ಹಲವರಿಗೆ ಕಾನೂನಿನಲ್ಲಿರುವ ಸೌಲಭ್ಯಗಳ ಮಾಹಿತಿ ಕೊರತೆ ಇದೆ. ಅದಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ನಿಷೇಧದ ಬಗ್ಗೆ ಕುರಿತು ಕಾನೂನು ಮಾಡಲಾಗಿದೆ. ಮಕ್ಕಳ ಹಕ್ಕುಗಳು ಸಂಬಂಧಿಸಿದಂತೆ ಮಕ್ಕಳಿಗೆ ತಿಳಿಸಿಕೊಡಬೇಕು. ಶಾಲಾ ಮಕ್ಕಳು ತಮ್ಮ ಉತ್ತಮ ವಿದ್ಯಾಭ್ಯಾಸದಿಂದ ಶೈಕ್ಷಣಿಕ ಪ್ರಗತಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಇಂದಿನ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಇತರೆ ಕಾರ್ಯಗಳತ್ತ ಮಾಡದೇ ಕೇವಲ ಶಿಕ್ಷಣದತ್ತ ಗಮನ ಹರಿಸಬೇಕು. ಎಲ್ಲರೂ ಕೀಳರಿಮೆ ಬಿಟ್ಟು ಶಿಕ್ಷಣಕ್ಕೆ ಹೆಚ್ಚನ ಮಹತ್ವ ನೀಡಬೇಕು. ಸಿವಿಲ್ ಪರೀಕ್ಷೆ ಬರೆದು ಉನ್ನತ ಹುದ್ದೆ ಅಲಂಕರಿಸಬೇಕೆಂದು ಹೇಳಿದರು.
ಕಾನೂನಿನಿಂದ ನೆರವು: ವಿದ್ಯಾರ್ಥಿ ದೆಸೆಯಲ್ಲಿ ಸಂವಿಧಾನ ತಿಳಿದು ಕಾನೂನಿಗೆ ಗೌರವ ನೀಡುತ್ತಾ ಜೀವನವನ್ನು ಸುಂದರ ಮತ್ತು ಸಾರ್ಥಕವಾಗಿ ರೂಪಿಸಿಕೊಳ್ಳಬೇಕು. ಜನನ, ಮರಣದ ನೋಂದಣಿ ಬಗ್ಗೆ ವಿವರಿಸಿ ಮಗು ಜನಿಸಿದ ತಕ್ಷಣ ಪ್ರಾರಂಭವಾಗುವ ಕಾನೂನು ತಾನು ಮೃತ ಪಡುವ ತನಕ ಇರಲಿದೆ. ಕಾನೂನು ಪ್ರತಿಯೊಬ್ಬರಿಗೂ ನೆರವು ನೀಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಬೈರೇಗೌಡ, ಉಪಾಧ್ಯಕ್ಷ ಗೋವಿಂ ದಸ್ವಾಮಿ, ಕಾರ್ಯದರ್ಶಿ ಡಿ.ಎಸ್.ಪ್ರಭಾಕರ್, ಗ್ರಾಮ ಪಂಚಾಯ್ತಿ ಸದಸ್ಯ ರಾಧಾಕೃಷ್ಣ ಇದ್ದರು.