ಡಿಸಿಸಿ ಬ್ಯಾಂಕ್ ಅವ್ಯವಹಾರ ತನಿಖೆಗೆ ಭರವಸೆ
Team Udayavani, Nov 23, 2018, 12:29 PM IST
ಕಲಬುರಗಿ: ಡಿಸಿಸಿ ಬ್ಯಾಂಕ್ನ ಬೆಳೆ ಸಾಲ ವಿತರಣೆಯಲ್ಲಿ ಲೋಪ ಹಾಗೂ ಸಾಲ ಮನ್ನಾ ಹಣದಲ್ಲಿ ಗೋಲ್ಮಾಲ್ ನಡೆದಿರುವ ಕುರಿತು ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿ ಕಳೆದ ಮಂಗಳವಾರದಿಂದ ಬಿಜೆಪಿ ತಾಲೂಕು ಘಟಕದ ವತಿಯಿಂದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನೇತೃತ್ವದಲ್ಲಿ ಜೇವರ್ಗಿ ತಹಶೀಲ್ದಾರ್ ಕಚೇರಿ ಎದುರು ಕೈಗೊಂಡಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹ ಹೆಚ್ಚುವರಿ ಜಿಲ್ಲಾಧಿಕಾರಿಗಳು ನೀಡಿದ ಭರವಸೆಯಿಂದಾಗಿ ಗುರುವಾರ ಅಂತ್ಯಗೊಂಡಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಅವರು, ಜೇವರ್ಗಿ ತಾಲೂಕಿನ ವಿಎಸ್ಎಸ್ಎನ್ ಸಂಘಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ಒಳಪಡಿಸಲು ತನಿಖಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎನ್ನುವ ಆದೇಶ ಪತ್ರಗಳನ್ನು ತೋರಿಸಿ ಸ್ಪಷ್ಟ ಭರವಸೆ ನೀಡಿದ್ದರಿಂದ ಸತ್ಯಾಗ್ರಹ ಹಿಂದಕ್ಕೆ ಪಡೆಯಲಾಯಿತು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ಬರೀ ತನಿಖೆಗೆ ಆದೇಶಿಸಿದರೆ ಸಾಲದು, ಮೊದಲು ಸಾಲ ಪಡೆದವರ ಜತೆಗೆ ಸಾಲ ಮನ್ನಾ ಆಗಿರುವ ರೈತರ ಪಟ್ಟಿಯನ್ನು ಸಂಘದ ನಾಮಫಲಕದಲ್ಲಿ ಪ್ರಕಟಿಸಬೇಕು. ತದನಂತರ ರೈತರ ಸಭೆ ಕರೆದು ತನಿಖೆ ನಡೆಸಬೇಕು.
ಡಿಸೆಂಬರ್ 9ರಿಂದ ಇನ್ನೂ ತಾಲೂಕಿನಲ್ಲಿ ವಿತರಣೆ ಮಾಡಬೇಕಾಗಿರುವ 14 ಕೋಟಿ ರೂ. ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು. ಸಹಾಯಕ ಆಯುಕ್ತ ಎಂ. ರಾಚಪ್ಪ, ಡಿಸಿಸಿ ಬ್ಯಾಂಕ್ನ ಎಂಡಿ ಗೋಪಾಲ ಚವ್ಹಾಣ, ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಇತರ ಅಧಿಕಾರಿಗಳು ಇದ್ದರು. ಇದಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕಲಬುರಗಿ ಮಹಾನಗರಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಬಿಜೆಪಿ ಬೇಟಿ ಬಚಾವೋ-ಬೇಟಿ ಪಢಾವೋ ರಾಜ್ಯ ಸಂಚಾಲಕ ಸುಭಾಷ ರಾಠೊಡ ಮಾತನಾಡಿ, ರೈತರ ಹೆಸರಿನ ಮೇಲೆ ಬೆಳೆ ಸಾಲ ಎತ್ತಿ ಅವರಿಗೆ ಕೊಡದೇ ಇರುವುದರ ಜತೆಗೆ ಮನ್ನಾ ಆಗಿರುವ ಹಣವನ್ನು ನೀಡಿಲ್ಲ. ಸಾಲದ ಹೆಸರಿನಲ್ಲಿ ವ್ಯಾಪಕ ಶೋಷಣೆ ನಡೆದಿರುವ ಕುರಿತು ದಾಖಲೆಗಳೆ ನಿರೂಪಿಸುತ್ತಿವೆ ಎಂದು ಆಪಾದಿಸಿದರು.
ಸಾಲ ವಿತರಣೆ ಹಾಗೂ ಮನ್ನಾದಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಎಂದು ಬ್ಯಾಂಕ್ ನಿರ್ದೇಶಕರು ಹಾಗೂ ಇತರರು ಹೇಳುವುದಾರೆ ತನಿಖೆಗೆ ಹೆದರುವುದೇಕೆ? ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಸತ್ತವರ ಹೆಸರಿನಲ್ಲಿಯೂ ಸಾಲಎತ್ತಿ ಹಾಕಲಾಗಿದೆ. ಆದ್ದರಿಂದ ಸಿಬಿಐ ತನಿಖೆಯಾಗದಿದ್ದರೂ ನಿವೃತ್ತ ನ್ಯಾಯಮೂರ್ತಿಗಳು, ಇಲ್ಲವೇ ಇತರ ಉನ್ನತಮಟ್ಟದ ಸಂಸ್ಥೆಯಿಂದ ತನಿಖೆ ನಡೆಸಬೇಕು.
ಜೇವರ್ಗಿ ತಹಶೀಲ್ದಾರ್ ಕಚೇರಿ ಎದುರು ಕಳೆದ ಮೂರು ದಿನಗಳಿಂದ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ನೇತೃತ್ವದಲ್ಲಿ ರೈತರೊಂದಿಗೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ. ಜಿಲ್ಲಾಡಳಿತದ ಈ ನಿರ್ಲಕ್ಷ್ಯತನ ವಿರುದ್ಧ ರೈತರು ಹಾಗೂ ಜನರು ದಂಗೆ ಎದ್ದರೂ ಆಶ್ಚರ್ಯಪಡುವಂತಿಲ್ಲ ಎಂದು ಎಚ್ಚರಿಸಿದರು.
ಮುಂಗಾರು-ಹಿಂಗಾರು ಎರಡೂ ಕೈ ಕೊಟ್ಟ ಪರಿಣಾಮ ವ್ಯಾಪಕ ಬರಗಾಲ ಬಿದ್ದು ಜನ ಗುಳೆ ಹೋಗುತ್ತಿದ್ದರೂ ಬರ ಕಾಮಗಾರಿ ಆರಂಭಿಸುತ್ತಿಲ್ಲ. ಕೆಲಸ ಆರಂಭಿಸಲು ಮುಹೂರ್ತ ಬೇಕೆ? ಜಿಲ್ಲಾ ಉಸ್ತುವಾರಿ ಸಚಿವರು ಬರ ಪರಿಸ್ಥಿತಿ ಅರಿಯಲೂ ಎಲ್ಲೂ ಹೋಗಿಲ್ಲ. ಮರಳು ಮಾಫಿಯಾ ಇನ್ನೂ ನಿಂತಿಲ್ಲ. ಜಿಲ್ಲಾಡಳಿತ ಬರೀ ಕಾಂಗ್ರೆಸ್ ನಾಯಕರನ್ನು ಓಲೈಸುವಲ್ಲಿ ತಲ್ಲೀನವಾಗಿದೆ ಎನ್ನುವಂತೆ ಭಾಸವಾಗುತ್ತಿದೆ. ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ವಿವಿಧ ಹಂತದ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶಹಾಪುರ ತಾಲೂಕಿನಲ್ಲೂ ಅವ್ಯವಹಾರ: ಡಿಸಿಸಿ ಬ್ಯಾಂಕ್ನ ಬೆಳೆ ಸಾಲ ವಿತರಣೆ ಹಾಗೂ ಸಾಲ ಮನ್ನಾದಲ್ಲಿ ಜೇವರ್ಗಿ ತಾಲೂಕಿನಲ್ಲಿ ಅವ್ಯವಹಾರವಾಗದೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಆಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿಯೂ ಅವ್ಯವಹಾರವಾಗಿದೆ.
ಇದಕ್ಕೆಲ್ಲ ಯಾರು ಹೊಣೆ? ಎಂಬುದು ಅಧಿಕಾರಿಗಳಿಗೆ ಗೊತ್ತಿದೆ. ಆದ್ದರಿಂದ ತನಿಖೆ ನಡೆಸಿ ಆಗಿರುವ ಲೋಪ ಸರಿಪಡಿಸಿ ಅಮಾಯಕ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ ಕಮಲಾಪುರ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡರಾದ ಹಣಮಂತ ಮಲಾಜಿ, ಮಂಜು ರೆಡ್ಡಿ ಮುಂತಾದವರಿದ್ದರು.
ಡಿಸಿಸಿ ಬ್ಯಾಂಕ್ನ ಬೆಳೆ ಸಾಲ ವಿತರಣೆ ಹಾಗೂ ಮನ್ನಾದಲ್ಲಿ ಅವ್ಯವಹಾರ ಆಗಿರುವ ಕುರಿತು ತನಿಖೆ ನಡೆಸುವ ಮುಖಾಂತರ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರೈತಪರ ಕಾಳಜಿ ಎನ್ನುವುದನ್ನು ನಿರೂಪಿಸಲಿ. ಲಕ್ಷ ರೂ. ವರೆಗಿನ ಸಾಲ ಮನ್ನಾ ಘೋಷಣೆಯನ್ನು ಋಣಪತ್ರ ನೀಡುವುದರ ಮುಖಾಂತರ ಕಾರ್ಯಾನುಷ್ಠಾನಕ್ಕೆ ತರಲಿ.
ಬಿ.ಜಿ. ಪಾಟೀಲ, ಬಿಜೆಪಿ ಮಹಾನಗರಾಧ್ಯಕ್ಷ, ಕಲಬುರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್