ಅಯೋಧ್ಯೆ: ಬಿಜೆಪಿ ಯಾವ ಮಟ್ಟಕ್ಕೂ ಹೋದೀತು: ಅಖೀಲೇಶ್
Team Udayavani, Nov 23, 2018, 7:15 PM IST
ಲಕ್ನೋ : ”ಭಾರತೀಯ ಜನತಾ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಮೇಲಾಗಲೀ, ಸಂವಿದಾನದ ಮೇಲಾಗಲೀ ನಂಬಿಕೆ ಇಲ್ಲ; ಆದುದರಿಂದ ಅಯೋಧ್ಯೆ ರಾಮ ಮಂದಿರದ ವಿಷಯದಲ್ಲಿ ಯಾವ ಮಟ್ಟಕ್ಕೂ ಹೋಗುವ ಸಾಧ್ಯತೆ ಇದೆ” ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಎಚ್ಚರಿಸಿದ್ದಾರೆ.
ಬಿಜೆಪಿಯಿಂದಾಗಿ ಅಯೋಧ್ಯೆಯಲ್ಲಿ ಏರ್ಪಡುವ ಸ್ಥಿತಿಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ನಿಗಾ ಇರಿಸಬೇಕಿದೆ ಎಂದು ಅಖೀಲೇಶ್ ಹೇಳಿರುವುದನ್ನು ಉಲ್ಲೇಖೀಸಿ ಎಎನ್ಐ ವರದಿ ಮಾಡಿದೆ.
ಅಯೋಧ್ಯೆಯಲ್ಲಿನ ಪರಿಸ್ಥಿತಿ ವಿಷಮಿಸಬಹುದೆಂದು ಅನ್ನಿಸಿದರೆ ಸರ್ವೋಚ್ಚ ನ್ಯಾಯಾಲಯ ಅಲ್ಲಿ ಸೇನೆಯನ್ನು ನಿಯೋಜಿಸುವುದು ಒಳಿತು ಎಂದು ಅಖೀಲೇಶ್ ಹೇಳಿದರು.
ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಅವರು ಇದೇ ನ.24ಮತ್ತು 25ರಂದು ಅಯೋಧ್ಯೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅಖೀಲೇಶ್ ಈ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.