ರಾಜ್ಯದ ವೃದ್ಧಾಪ್ಯ ವೇತನ ಯೋಜನೆ ಬಗ್ಗೆ ಟೀಕೆ
Team Udayavani, Nov 29, 2018, 6:25 AM IST
ಯಾದಗಿರಿ: ನೆರೆಯ ತೆಲಂಗಾಣದಲ್ಲಿ ಡಿ.7ರಂದು 119 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಅಬ್ಬರದ ಪ್ರಚಾರ ನಡೆದಿದ್ದು, ಅಭ್ಯರ್ಥಿಯೊಬ್ಬರು ಕರ್ನಾಟಕ ವೃದ್ಧಾಪ್ಯ ವೇತನ ಯೋಜನೆಯೊಂದನ್ನು ಟೀಕಿಸಿದ ವಿಡಿಯೋ ಈಗ ವೈರಲ್ ಆಗಿದೆ.
ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರರಾವ್ ನೇತೃತ್ವದ ಟಿಆರ್ಎಸ್ನ ಮಹಬೂಬ ನಗರದ ನಾರಾಯಣಪೇಟ್ ಕ್ಷೇತ್ರದ ಅಭ್ಯರ್ಥಿ ಎಸ್.ರಾಜೇಂದರ ರೆಡ್ಡಿಯವರು, ಗಡಿಯಲ್ಲಿ ಮತಯಾಚನೆ ಮಾಡುವ ವೇಳೆ ಯಾದಗಿರಿ ಜಿಲ್ಲೆಯ ವೃದ್ಧ ಮಹಿಳೆ ತನ್ನ ಸಂಬಂಧಿ ಮನೆಗೆ ತೆರಳಿರುವ ವೇಳೆ ನೀವು ಕರ್ನಾಟಕದವರಾ? ನಿಮಗೆ ಅಲ್ಲಿ ವೃದ್ಧಾಪ್ಯ ಪಿಂಚಣಿ ಸಿಗುತ್ತಾ, ಎಷ್ಟು ತಿಂಗಳಿಗೊಮ್ಮೆ ದೊರೆಯುತ್ತದೆ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕರ್ನಾಟಕದಲ್ಲಿ ತಿಂಗಳಿಗೆ ಕೇವಲ 500 ರೂ.ಸಿಗುತ್ತದೆ. ನಮ್ಮಲ್ಲಿ ಒಂದು ಸಾವಿರ ರೂ. ಇದೆ ಎಂದು ಹೋಲಿಸಿ ಮೂದಲಿಸಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ವೃದ್ಧ ಮಹಿಳೆಗೆ, ನಿಮ್ಮಲ್ಲಿರುವ ಕರ್ನಾಟಕದ ಕಾಂಗ್ರೆಸ್ನವರಿಗೆ ಹೋಗಿ ಹೇಳಿ, ಅಲ್ಲಿ ತೆಲಂಗಾಣದಲ್ಲಿ ಸಾವಿರ ರೂ.ಕೊಡ್ತಿದ್ದಾರೆ. ನಿಮಗೆ ಓಟ್ ಹಾಕಿದ್ವಿ, ನಮಗೂ ಸಾವಿರ ರೂ.ನೀಡಲು ನಿಮಗೇನು ದಾಡಿ ಬಂದಿದೆ ಎಂದು ಕೇಳಿ ಎನ್ನುವ ಮೂಲಕ ಚಾಟಿ ಬೀಸಿದ್ದಾರೆ.