ಕೊಳೆರೋಗಕ್ಕೆ 69.07 ಕೋ.ರೂ. ಪರಿಹಾರ
Team Udayavani, Dec 17, 2018, 9:17 AM IST
ಮಂಗಳೂರು: ಕೊಳೆರೋಗ ಬಾಧಿತ ಅಡಿಕೆ ಕೃಷಿಕರ ನೋವಿಗೆ ಕೇಂದ್ರ ಸರಕಾರ ಸ್ಪಂದಿಸಿದ್ದು, ದ.ಕ. ಜಿಲ್ಲೆಯ 60 ಕೋ.ರೂ. ಹಾಗೂ ಉಡುಪಿಯ 9.07 ಕೋ.ರೂ. ಪ್ರಸ್ತಾವನೆಗೆ ಅಸ್ತು ಎಂದಿದೆ. ಹೀಗಾಗಿ ಅರ್ಜಿ ಸಲ್ಲಿಸಿದ ಬೆಳೆಗಾರರಿಗೆ ಪರಿಶೀಲನೆಯ ಬಳಿಕ ಎಕರೆಗೆ 6,800 ರೂ.ಗಳಷ್ಟು ಪರಿಹಾರ ದೊರೆಯಲಿದೆ.
“ದ.ಕ. ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರಿಗೆ ಪರಿ ಹಾರ ಇನ್ನೂ ದೊರೆತಿಲ್ಲ’ ಎಂದು ಶಾಸಕ ಹರೀಶ್ ಪೂಂಜ ಡಿ.14ರಂದು ವಿಧಾನಸಭೆಯಲ್ಲಿ ಪ್ರಶ್ನಿಸಿದ ಬೆನ್ನಿಗೇ, ಕೇಂದ್ರದಿಂದ ಬಂದ ಪರಿಹಾರ ಮೊತ್ತವನ್ನು ರಾಜ್ಯ ಸರಕಾರ ಹಂಚಿಕೆ ಮಾಡಿದೆ.
ದ.ಕ.ದಲ್ಲಿ 33,395 ಹೆಕ್ಟೇರ್ ತೋಟ ಕೊಳೆರೋಗ ಬಾಧಿತವಾಗಿದ್ದು, ಎನ್ಡಿಆರ್ಎಫ್ ನಿಯಮಾನುಸಾರ 60 ಕೋ.ರೂ. ಪರಿಹಾರ ಒದಗಿಸುವಂತೆ ತೋಟಗಾರಿಕೆ ಇಲಾಖೆ ಸಲ್ಲಿಸಿದ ವರದಿಯ ಅನ್ವಯ ಕೇಂದ್ರವು ಪರಿಹಾರ ಪ್ಯಾಕೇಜ್ ಪ್ರಕಟಿಸಿದೆ. ಇದರಂತೆ ತಾಲೂಕು ಅಧಿಕಾರಿಗಳು ಪರಿಶೀಲನೆ ನಡೆಸಿದ ಹಲವು ಅರ್ಜಿ ದಾರರಿಗೆ ಶನಿವಾರ 6 ಕೋ.ರೂ.ಗಳನ್ನು ಬಿಡುಗಡೆ ಮಾಡಿದೆ. ಉಳಿದವನ್ನು ಸೋಮವಾರದಿಂದ ಹಂತ ಹಂತವಾಗಿ ಪರಿಶೀಲಿಸಿ ಬಿಡುಗಡೆ ಮಾಡಲಾಗುತ್ತದೆ. ಉಡುಪಿ ಜಿಲ್ಲೆಯಿಂದ ಸಲ್ಲಿಕೆಯಾದ 9.07 ಕೋ.ರೂ. ಪ್ರಸ್ತಾವನೆಗೂ ಒಪ್ಪಿಗೆ ದೊರೆತಿದ್ದು, ಕೆಲವು ಅರ್ಜಿಗಳ ಪರಿಶೀಲನೆ ನಡೆಸಿ, 47 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಉಳಿದವು ಸೋಮವಾರದಿಂದ ಪರಿಶೀಲನೆಯಾಗಿ ಪರಿಹಾರ ವಿತರಣೆಯಾಗಲಿದೆೆ.
ಹೊಸ “ಪರಿಹಾರ’
ಇಲ್ಲಿಯವರೆಗೆ ಪರಿಹಾರ ಹಣವು ಜಿಲ್ಲಾಡಳಿತದ ಮೂಲಕ ತಾಲೂಕುಗಳಿಗೆ ವಿತರಣೆಯಾಗುತ್ತಿತ್ತು. ಆದರೆ ಈ ಬಾರಿ “ಪರಿಹಾರ’ ತಂತ್ರಾಂಶದ ಮೂಲಕ ಫಲಾನುಭವಿಗಳ ಖಾತೆಗೆ ನೇರ ವರ್ಗಾಯಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಆಯಾ ತಾಲೂಕು ವ್ಯಾಪ್ತಿಯಲ್ಲಿ ಸಲ್ಲಿಕೆಯಾದ ಅರ್ಜಿಗಳ ಬಗ್ಗೆ ತಾ. ಪಂ. ಅಧಿಕಾರಿಗಳು ಪರಾಮರ್ಶೆ ಆರಂಭಿಸಿದ್ದಾರೆ. ಅರ್ಜಿದಾರರ ಆಧಾರ್, ಬ್ಯಾಂಕ್ ಖಾತೆ ಇತ್ಯಾದಿ ಮಾಹಿತಿಯನ್ನು “ಪರಿಹಾರ’ ತಂತ್ರಾಂಶಕ್ಕೆ ಅಪ್ಲೋಡ್ ಕೆಲಸ ಪ್ರಗತಿಯಲ್ಲಿದೆ.
ಗರಿಷ್ಠ ಪರಿಹಾರ
2007, 2013ರ ಅನಂತರ ಈ ವರ್ಷ ದೊಡ್ಡ ಪ್ರಮಾಣದಲ್ಲಿ ಕೊಳೆರೋಗ ಬಾಧಿಸಿತ್ತು. 2007 ರಲ್ಲಿ 20,000 ಹೆ. ಪ್ರದೇಶದಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದು, 4.59 ಕೋ.ರೂ. ಪರಿಹಾರ ವಿತರಿಸಲಾಗಿತ್ತು. 2013ರಲ್ಲಿ ರೋಗ ಬಾಧಿತ 25,000 ಹೆಕ್ಟೇರ್ಗೆ 30 ಕೋ.ರೂ. ಪ್ಯಾಕೇಜ್ ಘೋಷಿಸಲಾಗಿತ್ತು. ಇದಕ್ಕೆ ಹೋಲಿಸಿದಾಗ ಈ ಬಾರಿ ದ.ಕ. ಜಿಲ್ಲೆಗೆ 60 ಕೋ.ರೂ. ಗರಿಷ್ಠ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ.
ಸಾಲದು ಈ ಪರಿಹಾರ!
ದ.ಕ. ಜಿಲ್ಲೆಯಲ್ಲಿ 2018-19ರಲ್ಲಿ 33,595 ಹೆಕ್ಟೇರ್ನಲ್ಲಿ ಕೊಳೆರೋಗದಿಂದ 252 ಕೋ.ರೂ. ನಷ್ಟ ಸಂಭವಿಸಿದೆ ಎಂದು ರಾಜ್ಯ ಸರಕಾರ ಅಂದಾಜಿಸಿದೆ. ಪ್ರಸ್ತುತ ಎನ್ಡಿಆರ್ಎಫ್ ನಿಯಮಾನುಸಾರ ಕೇಂದ್ರದಿಂದ 60 ಕೋ.ರೂ. ಬಂದಿದೆ. ಆದರೆ ಈ ಮೊತ್ತ ಏನೇನೂ ಸಾಲದು. ಒಂದೆಕರೆಯಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಅಡಿಕೆ ಬೆಳೆಯುವ ಬೆಳೆಗಾರರಿಗೆ ಈಗ ಕೇವಲ 6,800 ರೂ. ಮಾತ್ರ ಪರಿಹಾರ ಸಿಗಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಇನ್ನಷ್ಟು ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಬೆಳೆಗಾರರೊಬ್ಬರ ಅಭಿಪ್ರಾಯ.
ಪರಿಹಾರ ವಿತರಣೆ
ದ.ಕ. ಜಿಲ್ಲೆಯಿಂದ ಸಲ್ಲಿಕೆಯಾಗಿ ರುವ ಪ್ರಸ್ತಾವನೆಯ ಪ್ರಕಾರ 60 ಕೋ.ರೂ. ಪರಿಹಾರ ಬಂದಿದೆ. “ಪರಿಹಾರ’ ತಂತ್ರಾಂಶದ ಮೂಲಕ ಹಂಚಿಕೆ ಆರಂಭಿಸಲಾಗಿದೆ. ಅರ್ಜಿ ನೀಡಿದ ಬೆಳೆಗಾರರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಕೆಲವೇ ದಿನಗಳಲ್ಲಿ ಜಮೆ ಆಗಲಿದೆ.
ಶಶಿಕಾಂತ್ ಸೆಂಥಿಲ್ಜಿಲ್ಲಾಧಿಕಾರಿ, ದ.ಕ.
ಸಾಲಮನ್ನಾ ಆಗಲಿ
ದ.ಕ. ಜಿಲ್ಲೆಯ ಅಡಿಕೆ ಬೆಳೆಗಾರರ ರಕ್ಷಣೆಗೆ ಕೇಂದ್ರವು ಎನ್ಡಿಆರ್ಎಫ್ನಿಂದ 60 ಕೋ.ರೂ. ಬಿಡುಗಡೆ ಮಾಡಿದೆ. ರಾಜ್ಯ ಸರಕಾರ ಇನ್ನಾದರೂ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು. ಕೊಳೆರೋಗ ಪೀಡಿತ ಅಡಿಕೆ ಬೆಳೆ ಗಾರನ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಮುಂದಾಗ ಬೇಕು. ಕನಿಷ್ಠ ಬೆಂಬಲ ಬೆಲೆ ಹಾಗೂ ಕೊಳೆರೋಗಕ್ಕೆ ಮೂಲ ಕಾರಣ ಪತ್ತೆಹಚ್ಚಲು ಪೂರ್ಣ ಸಂಶೋಧನೆ ರಾಜ್ಯ ಸರಕಾರದ ಮೂಲಕ ನಡೆಯಬೇಕಾಗಿದೆ.
ಹರೀಶ್ ಪೂಂಜ, ಶಾಸಕರು
ಪ್ರಸ್ತಾವನೆಗೆ ಒಪ್ಪಿಗೆ
ಕೊಳೆರೋಗಕ್ಕೆ ಸಂಬಂಧಿಸಿ ಉಡುಪಿಯಲ್ಲಿ 9.07 ಕೋ.ರೂ.ಗಳ ಪ್ರಸ್ತಾವನೆಗೆ ಸರಕಾರ ಒಪ್ಪಿಗೆ ನೀಡಿದ್ದು, “ಪರಿಹಾರ’ದ ಮೂಲಕ ಹಂಚಿಕೆಗೆ ಅನುಮತಿ ನೀಡಲಾಗಿದೆ. ಫಲಾನು ಭವಿಗಳ ಡೇಟಾ ಎಂಟ್ರಿ ನಡೆಸಿ, ಆಧಾರ್ ಇನ್ನಿತರ ವಿವರ ದಾಖಲಿಸಿ ಪರಿಹಾರ ವಿತರಿಸಲಾಗುವುದು.
ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ, ಉಡುಪಿ
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ