ಜೀವಾವಧಿ ಶಿಕ್ಷೆ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಲೇರಿದ ಸಜ್ಜನ್
Team Udayavani, Dec 22, 2018, 5:20 PM IST
ಹೊಸದಿಲಿ : 1984ರ ಸಿಕ್ಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು ದಿಲ್ಲಿ ಹೈಕೋರ್ಟಿನಿಂದ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿರುವ ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರು ತನಗಾಗಿರುವ ಶಿಕ್ಷೆಯನ್ನು ಪ್ರಶ್ನಿಸಿ ಇಂದು ಶನಿವಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ.
ಹೈಕೋರ್ಟ್ ತೀರ್ಪಿನ ವಿರುದ್ಧ ಸಜ್ಜನ್ ಕುಮಾರ್ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿರುವ ಬಗ್ಗೆ ಕೋರ್ಟಿನ ರಿಜಿಸ್ಟ್ರಿ ತನಗೆ ಮಾಹಿತಿ ನೀಡಿದೆ ಎಂದು ಸಿಕ್ಖ್ ವಿರೋಧಿ ಗಲಭೆ ಸಂತ್ರಸ್ತರನ್ನು ಕೋರ್ಟಿನಲ್ಲಿ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಎಚ್ ಎಸ್ ಫೂಲ್ಕ ತಿಳಿಸಿದ್ದಾರೆ.
ಸಜ್ಜನ್ ಕುಮಾರ್ ಪರವಾಗಿ ಮತ್ತು ಸಂತ್ರಸ್ತರ ಗೈರಿನಲ್ಲಿ, ಯಾವುದೇ ವಿಚಾರಣೆಯನ್ನು ನಡೆಸುವುದರ ವಿರುದ್ಧ ಸಂತ್ರಸ್ತರು ಸುಪ್ರೀಂ ಕೋರ್ಟಿಗೆ ಈಗಾಗಲೇ ಕೇವಿಯಟ್ ಸಲ್ಲಿಸಿದ್ದಾರೆ ಎಂದು ಫೂಲ್ಕ ಹೇಳಿದರು.