ಮಿಂಚೇರಿ ಜಾತ್ರೆಗೆ ಎತ್ತಿನಗಾಡಿ ಪಯಣ
Team Udayavani, Dec 23, 2018, 11:10 AM IST
ಚಿತ್ರದುರ್ಗ: “ಎತ್ತಿನ ಗಾಡಿ ಏರೋಣ ಬನ್ನಿ ಮಿಂಚೇರಿ ಯಾತ್ರೆ ಮಾಡೋಣ ಬನ್ನಿ’ ಎಂಬ ಹರ್ಷೋದ್ಘಾರದೊಂದಿಗೆ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿಯ ಮ್ಯಾಸ ನಾಯಕ ಸಮುದಾಯದವರು ಮಿಂಚೇರಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಶನಿವಾರ ಎತ್ತಿನಗಾಡಿಗಳಲ್ಲಿ ತೆರಳಿದರು.
ಬಚ್ಚಬೋರನಹಟ್ಟಿ ಮಾರ್ಗವಾಗಿ ಗೋನೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಚಿತ್ರದುರ್ಗ, ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಾಪುರ, ಕಡ್ಲೆಗುದ್ದು, ಮೇಗಳಹಟ್ಟಿ, ಕೋಣನೂರು, ಚುಕ್ಕೇನಹಳ್ಳಿ, ಸಿರಿಗೆರೆ, ಮದಕರಿಪುರ ಹಾಗೂ ಮಿಂಚೇರಿಪುರದವರೆಗೆ ಎತ್ತಿನಬಂಡಿ ಯಾತ್ರೆ ನಡೆಯಲಿದೆ. ಮ್ಯಾಸ ನಾಯಕ ಸಮುದಾಯದ ಸಾಂಸ್ಕೃತಿಕ ವೀರ ಗಾದ್ರಿಪಾಲ ನಾಯಕ ಸ್ವಾಮಿಯ ಹೆಸರಿನಲ್ಲಿ ಸಾಲು ಸಾಲಾಗಿ ಹೊರಟ ಎತ್ತಿನ ಗಾಡಿಗಳು ಕಣ್ಮನ ಸೆಳೆದವು.
ಏನಿದು ಮಿಂಚೇರಿ ಜಾತ್ರೆ?: ಬುಡಕಟ್ಟು ಸಂಸ್ಕೃತಿಯ ಮ್ಯಾಸ ನಾಯಕ ಎಂದೇ ಹೆಸರಾಗಿರುವ ಗಾದ್ರಿಪಾಲ ನಾಯಕ ತಾಲೂಕಿನ ಸಿರಿಗೆರೆ ಬಳಿಯ ಮದಕರಿಪುರ ಗ್ರಾಮದ ಬಳಿಯ ಕಾಡಿನಲ್ಲಿ ಹುಲಿಯ ಜತೆ ಸೆಣಸಾಡಿ ಮರಣ ಹೊಂದಿದ ಎಂಬ ಪ್ರತೀತಿ ನಾಯಕ ಸಮುದಾಯದವರಲ್ಲಿದೆ. ಈ ಕಾರಣದಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಮಿಂಚೇರಿ ಜಾತ್ರೆ ಆಚರಿಸಲಾಗುತ್ತಿದೆ.
ಈ ಯಾತ್ರೆಗೆ ಸಾವಿರಾರು ಮಂದಿ ತಮ್ಮ ಸಂಬಂಧಿಕರೊಂದಿಗೆ ಸಂಪ್ರದಾಯದಂತೆ ಎತ್ತಿನಗಾಡಿಗಳಲ್ಲಿ ತೆರಳುತ್ತಾರೆ. ಆಧುನಿಕ ಭರಾಟೆಗೆ ಸಿಲುಕಿ ಸಂಪ್ರದಾಯಗಳು ನಶಿಸಿಹೋಗುತ್ತಿರುವ ಸಂದರ್ಭದಲ್ಲೂ ಮಿಂಚೇರಿ ಯಾತ್ರೆ ಮಾತ್ರ ಗ್ರಾಮೀಣ ಸೊಗಡನ್ನು ಉಳಿಸಿಕೊಂಡಿರುವುದು ಬುಡಕಟ್ಟು ಸಂಸ್ಕೃತಿಯ ಗಟ್ಟಿತನವನ್ನು ಪ್ರತಿಬಿಂಬಿಸುತ್ತಿದೆ.
ಮಿಂಚೇರಿ ಪಯಣ: ತಾಲೂಕಿನ ಬಚ್ಚಬೋರನಹಟ್ಟಿಯಿಂದ ಮಿಂಚೇರಿ ಜಾತ್ರೆಗೆ ಪಯಣ ಆರಂಭವಾಗುತ್ತದೆ. ಇಲ್ಲಿ ಮ್ಯಾಸ
ನಾಯಕ ಸಮುದಾಯದ ಆರಾಧ್ಯ ದೈವ ಗಾದ್ರಿಪಾಲ ನಾಯಕನ ದೇವಸ್ಥಾನವಿದೆ. ಮಿಂಚೇರಿಗೆ ಹೊರಡುವ ಹಿಂದಿನ ದಿನವೇ ಜಿಲ್ಲೆಯ ವಿವಿಧೆಡೆಗಳಿಂದ ಎತ್ತಿನಗಾಡಿಗಳಲ್ಲಿ ಬರುವ ಭಕ್ತರು ಇಲ್ಲಿ ಬೀಡು ಬಿಡುತ್ತಾರೆ. ಇಲ್ಲಿಂದ ಹೊರಡುವ ಸಮಯದಲ್ಲಿ ಊಟಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಕೊಂಡೊಯ್ಯುತ್ತಾರೆ. ಗಾದ್ರಿ ಗುಡ್ಡಕ್ಕೆ (ಮಿಂಚೇರಿ) ಹೊರಟಿರುವ ನೂರಾರು ಮಂದಿ ರಾತ್ರಿ ಮಾರ್ಗ ಮಧ್ಯದ ಕ್ಯಾಸಾಪುರದಲ್ಲಿ ತಂಗುತ್ತಾರೆ.
ರಾತ್ರಿ ಗಾದ್ರಿಪಾಲ ನಾಯಕನಿಗೆ ಪೂಜೆ ಸಲ್ಲಿಸಿ ಆತನ ಹೆಸರಿನಲ್ಲಿ ಎಡೆ ಬಿಡಾರ ಮಾಡಿ ಊಟ ಮಾಡುತ್ತಾರೆ. ಮರುದಿನ ಬೆಳಿಗ್ಗೆ ಎದ್ದು ಉಪಾಹಾರ ಮುಗಿಸಿ ಮುಂದೆ ಸಾಗುತ್ತಾರೆ. ಹೀಗೆ ಸಾಗುವ ಎತ್ತಿನಬಂಡಿಗಳ ಸಾಲು ಡಿ. 23 ರಂದು ಸಂಜೆ ವೇಳೆಗೆ ಗಾದ್ರಿಗುಡ್ಡವನ್ನು ತಲುಪುತ್ತವೆ. ರಾತ್ರಿ ಅಲ್ಲಿ ತಂಗುವ ಭಕ್ತರು ಡಿ. 24ರ ಬೆಳಿಗ್ಗೆ 7 ಗಂಟೆಗೆ ಹುಲಿಯ ಸಮಾಧಿಗೆ ಹಾಗೂ ಕುಲದೈವ ಗಾದ್ರಿಪಾಲ ನಾಯಕನ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ಮಣೇವು ಅರ್ಪಿಸುತ್ತಾರೆ. ನಂತರ ಮಲಿಯಮ್ಮ, ಕಣಿವೆ ಮಾರಮ್ಮ ದೇವತೆಗೆ ಗಂಗಾಪೂಜೆ ನೆರವೇರಿಸಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ.
ಡಿ. 25 ರಂದು ಬೆಳಿಗ್ಗೆ ಸ್ವಾಮಿಯ ಜಂಗಮ ಸ್ವರೂಪಿ ಸದ್ಭಕ್ತರಿಂದ ಭಿಕ್ಷೆ ಸ್ವೀಕಾರ, ನಂತರ ದಾಸೋಹ ನಡೆಯುತ್ತದೆ. ಮಧ್ಯಾಹ್ನದ ಹೊತ್ತಿಗೆ ಎಲ್ಲರೂ ಮಿಂಚೇರಿ ಕ್ಷೇತ್ರದಿಂದ ನಿರ್ಗಮಿಸುತ್ತಾರೆ. ಅಂದು ಸಂಜೆ ಭೀಮಸಮುದ್ರ ಗ್ರಾಮ ಸಮೀಪದ ಕಡ್ಲೆಗುದ್ದು ಎಂಬ ಹಳ್ಳಿಯ ಬಳಿ ತಂಗುತ್ತಾರೆ. ಡಿ. 26 ರಂದು ಬೆಳಿಗ್ಗೆ ಕ್ಯಾಸಾಪುರದ ಹತ್ತಿರವಿರುವ ಜನಗಿ ಹಳ್ಳದ ದಂಡೆಯಲ್ಲಿ ಗಂಗಾಪೂಜೆ ಮುಗಿಸಿ ಚಿತ್ರದುರ್ಗ ನಗರಕ್ಕೆ ಆಗಮಿಸುತ್ತಾರೆ.
ನಗರದಲ್ಲಿ ಎತ್ತಿನಗಾಡಿಗಳ ಮೆರವಣಿಗೆ ನಡೆಸಿ ಇಲ್ಲಿನ ವಿವಿಧ ದೇವತೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಡಿ. 27 ರಂದು ಬಚ್ಚಬೋರನಹಟ್ಟಿ ತಲುಪಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಜನರು ಎತ್ತಿನಬಂಡಿಗಳಲ್ಲಿ ತಮ್ಮ ಸ್ವಸ್ಥಾನಕ್ಕೆ ಮರಳುತ್ತಾರೆ.
300 ಎತ್ತಿನಗಾಡಿಗಳಲ್ಲಿ ಹೊರಟರು ಜನ ಮಿಂಚೇರಿ ಜಾತ್ರೆ ತನ್ನದೇ ಆದ ವೈಶಿಷ್ಟ ಹೊಂದಿದೆ. ಬುಡಕಟ್ಟು ಸಂಸ್ಕೃತಿಯ ಈ
ಆಚರಣೆ ಆಧುನಿಕತೆಯ ಸ್ಪರ್ಶವನ್ನೂ ಪಡೆದುಕೊಂಡಿದೆ. ಈ ಬಾರಿ 300 ಎತ್ತಿನ ಗಾಡಿಗಳು ಜಾತ್ರೆಗೆ ತೆರಳಿದವು. ಬಚ್ಚಬೋರನಹಟ್ಟಿಯಲ್ಲಿ ಶನಿವಾರ ದೇವರ ಮಜ್ಜನ ಬಾವಿಯಲ್ಲಿ ಗುರು ಹಿರಿಯರೊಂದಿಗೆ ಗಂಗಾಪೂಜೆ ನೆರವೇರಿಸಿ ಮಿಂಚೇರಿ ಯಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ
Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ