“ಅಯ್ಯೋ ರಾಮ, ನನ್ನನ್ನು ಯಾರು ನೆನಪಿಸಿಕೊಳ್ತಾರೆ’
Team Udayavani, Dec 26, 2018, 7:49 AM IST
ಬೆಂಗಳೂರು: ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ನಿರ್ಮಿಸಲಾಗಿರುವ ಅತಿ ಉದ್ದದ್ದ ಬೋಗಿಬೀಲ್ ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, “ಅಯ್ಯೋ ರಾಮ ನನ್ನನ್ನು ಯಾರು ನೆನಪಿಸಿಕೊಳ್ತಾರಪ್ಪಾ’ ಎಂದು ಪ್ರತಿಕ್ರಿಯಿಸಿದ್ದಾರೆ.
ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಶಿಲಾನ್ಯಾಸ ನೆರವೇರಿಸಿದ್ದ ಸೇತುವೆಯನ್ನು ಪ್ರಧಾನಿ ನರೇಂದ್ರಮೋದಿ ಮಂಗಳವಾರ ಲೋಕಾರ್ಪಣೆಗೊಳಿಸಿದ್ದು, ಆ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸಲಿಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಮೇಲಿನಂತೆ ಹೇಳಿದರು. ಅಷ್ಟೇ ಅಲ್ಲದೆ, ಉತ್ತರ ಕರ್ನಾಟಕಕ್ಕೆ ದೇವೇಗೌಡರು ಏನೂ ಮಾಡಿಲ್ಲ ಎಂದು ಆ ಭಾಗದ ಕೆಲವರು ಹೇಳುತ್ತಾರೆ. ಕೃಷ್ಣಾ ಯೋಜನೆ ಜಾರಿಯಾಗಲು ನನ್ನ ಶ್ರಮ ಏನು ಎಂಬುದು ಅಲ್ಲಿ ಹೋಗಿ ನೋಡಲಿ ಎಂದು ತಿಳಿಸಿದರು. ತಾವು ಶಿಲಾನ್ಯಾಸ ನೆರವೇರಿಸಿದ್ದ ಯೋಜನೆ ಪೂರ್ಣಗೊಳಿಸಿದ್ದಕ್ಕೆ ಹಿಂದಿನ ಪ್ರಧಾನಿ ಮನಮೋಹನ್ಸಿಂಗ್ ಹಾಗೂ ಈಗಿನ ಪ್ರಧಾನಿ ಮೋದಿ ಅವರಿಗೆ ಗೌಡರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದರು.