ಮನೆ ಸೂರಿನಿಂದ ಹಿಮ ಸರಿಸುತ್ತಿದ್ದ ವ್ಯಕ್ತಿ ಕೆಳ ಬಿದ್ದು ಸಾವು
Team Udayavani, Jan 5, 2019, 10:26 AM IST
ಶ್ರೀನಗರ : ತನ್ನ ಮನೆ ಸೂರಿನ ಮೇಲೆ ತುಂಬಿಕೊಂಡಿದ್ದ ಹಿಮವನ್ನು ತೆರವು ಗೊಳಿಸುತ್ತಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕೆಳ ಬಿದ್ದು ಮೃತ ಪಟ್ಟ ಘಟನೆ ಇಂದು ಶನಿವಾರ ಬೆಳಗ್ಗೆ ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಡಿಪೋರಾ ಪಟ್ಟಣದ ನಾಲ್ಕನೇ ವಾರ್ಡ್ ನಿವಾಸಿಯಾಗಿರುವ ಮುಮ್ತಾಜ್ ಅಹ್ಮದ್ ಎಂಬವರು ಮನೆ ಸೂರಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡಾಗ ಅವರನ್ನು ಒಡನೆಯೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಕೊನೆಯುಸಿರೆಳೆದರು ಎಂದು ಉಪ ಆಯುಕ್ತ ಶಹೀದ್ ಇಕ್ಬಾಲ್ ಚೌಧರಿ ತಿಳಿಸಿದರು. ಅಹ್ಮದ್ ಅವರ ದುಃಖತಪ್ತ ಕುಟುಂಬಕ್ಕೆ ನಾಲ್ಕು ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ ಎಂದವರು ಹೇಳಿದರು.