ವಿಕಾಸಸೌಧದಲ್ಲೇ ಕೆಲಸದ ಡೀಲ್
Team Udayavani, Jan 16, 2019, 12:30 AM IST
ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 24ಲಕ್ಷ ರೂ. ಪಡೆದು ನಾಲ್ವರಿಗೆ ವಂಚಿಸಿದ್ದ ಆರೋಪ ಪ್ರಕರಣದಲ್ಲಿ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಉಪಕಾರ್ಯದರ್ಶಿ ಸೇರಿದಂತೆ ಮೂವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಗ್ಯ ಇಲಾಖೆ ಉಪಕಾರ್ಯದರ್ಶಿ ರಾಮಚಂದ್ರಯ್ಯ, ಅನುದಾನಿತ ಪಿಯು ಕಾಲೇಜಿನ ಉಪನ್ಯಾಸಕ ದೇವರಾಜ್, ಖಾಸಗಿ ಶಾಲಾ ಶಿಕ್ಷಕ ಲಕ್ಷ್ಮೀನಾರಾಯಣ ಬಂಧಿತರು. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ದೇವರಾಜು ಅರಸು ನಿಗಮದಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಹುದ್ದೆ ಕೊಡಿಸುವುದಾಗಿ ಹೇಳಿ ಚನ್ನಪಟ್ಟಣ ತಾಲೂಕಿನ ಶ್ರೀಕಂಠಯ್ಯ ಸೇರಿದಂತೆ ನಾಲ್ವರಿಂದ ತಲಾ 6 ಲಕ್ಷ ರೂ.ಗಳಂತೆ 24 ಲಕ್ಷ ರೂ.ಪಡೆದು ರಾಮಚಂದ್ರಯ್ಯ, ಲಕ್ಷ್ಮೀ ನಾರಾಯಣ ವಂಚಿಸಿರುವ ಆರೋಪ ಪ್ರಕರಣ ಸಂಬಂಧ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಆರೋಪಿ ದೇವರಾಜ್ ಬಳಿ 2.5 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ವಿಕಾಸಸೌಧದಲ್ಲಿಯೇ ಲಂಚದ ಹಣ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.