ವರ್ಮಾ ವಿರುದ್ಧದ ಸಿವಿಸಿ ವರದಿ ಬಹಿರಂಗಕ್ಕೆ ಆಗ್ರಹ
Team Udayavani, Jan 16, 2019, 3:38 AM IST
ನವದೆಹಲಿ: ಸಿಬಿಐನ ವಜಾಗೊಂಡಿರುವ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಸಲ್ಲಿಸಿರುವ ವರದಿ ಬಹಿರಂಗಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಅಲ್ಲದೆ, ಕೇಂದ್ರ ತನಿಖಾ ಸಂಸ್ಥೆಯ ಪ್ರಭಾರ ನಿರ್ದೇಶಕರನ್ನಾಗಿ ಎಂ.ನಾಗೇಶ್ವರ ರಾವ್ರನ್ನು ನೇಮಕ ಮಾಡಿದ್ದನ್ನೂ ಅವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಅವರು, ನಾಗೇಶ್ವರ ರಾವ್ ನೇಮಕವೇ ಅಕ್ರಮವಾಗಿದ್ದು, ಕೂಡಲೇ ಹೊಸ ನಿರ್ದೇಶಕರ ನೇಮಕಕ್ಕಾಗಿ ಆಯ್ಕೆ ಸಮಿತಿ ಸಭೆ ಸೇರುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.
ಸ್ವತಂತ್ರ ನಿರ್ದೇಶಕರ ನೇಮಕಕ್ಕೆ ಕೇಂದ್ರ ಸರ್ಕಾರ ಭೀತಿಯಿಂದ ಹಿಂದೇಟು ಹಾಕುತ್ತಿದೆ ಎಂದು ಅವರು ಆಪಾದಿಸಿದ್ದಾರೆ. ಇದರ ಜತೆಗೆ ನ್ಯಾ.ಎ.ಕೆ.ಪಟ್ನಾಯಕ್ ನೇತೃತ್ವದ ಸಮಿತಿಯ ವರದಿ ಮತ್ತು ಜ.10ರಂದು ನಡೆದ ಸಭೆಯ ನಡಾವಳಿಗಳನ್ನು ಕೂಡ ಬಹಿರಂಗಗೊಳಿಸಬೇಕು ಎಂದು ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.