ಸಂಪುಟದಿಂದ ಪುಟ್ಟರಂಗಶೆಟ್ಟಿ ಕೈಬಿಡದಿರಲು ಒತ್ತಾಯ
Team Udayavani, Jan 17, 2019, 9:26 AM IST
ರಾಯಚೂರು: ಉಪ್ಪಾರ ಸಮಾಜದ ಏಕೈಕ ಶಾಸಕರಾದ ಸಚಿವ ಪುಟ್ಟರಂಗಶೆಟ್ಟಿ ಅವರು ಪ್ರಾಮಾಣಿಕರಾಗಿದ್ದು, ಅವರ ವಿರುದ್ಧ ಕಾಣದ ಕೈಗಳು ಷಡ್ಯಂತ್ರ ನಡೆಸಿವೆ. ಅವರನ್ನು ಯಾವುದೇ ಕಾರಣಕ್ಕೂ ಸಂಪುಟದಿಂದ ಕೈಬಿಡಬಾರದು ಎಂದು ಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಿದ ಸಂಘದ ಸದಸ್ಯರು, ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷ ಹಾಗೂ ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ವಿರುದ್ಧ ಸುಳ್ಳು ಆಪಾದನೆ ಮಾಡಲಾಗಿದೆ. ಹಿಂದುಳಿದ ಉಪ್ಪಾರ ಸಮಾಜದ ಪ್ರತಿನಿಧಿಯಾಗಿರುವ ಅವರು ಕೇವಲ ಉಪ್ಪಾರ ಸಮಾಜ ಮಾತ್ರವಲ್ಲದೇ ಹಿಂದುಳಿದ ಸಮಾಜಗಳ ಶ್ರೇಯಸ್ಸಿಗೆ ಶ್ರಮಿಸುತ್ತಿದ್ದಾರೆ. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಎಲ್ಲ ಸಮುದಾಯದ ಸಮಸ್ಯೆಗಳಿಗೂ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಆದರೆ, ಅವರ ಏಳಿಗೆ ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ದುರುದ್ದೇಶಪೂರ್ವಕವಾಗಿ ಅವರ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿವೆ. ಅವರನ್ನೇ ಗುರಿಯಾಗಿಸಿಕೊಂಡು ಅವರ ಪ್ರಾಮಾಣಿಕತೆಗೆ ಚ್ಯುತಿ ತರುವಂತೆ ಷಡ್ಯಂತ್ರ ರೂಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಥ ಆಪಾದನೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಮುಖ್ಯಮಂತ್ರಿಗಳು ಅವರಿಗೆ ಇನ್ನೂ ಹೆಚ್ಚಿನ ಸೇವೆ ಮಾಡಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ವೆಂಕೋಬ ಉಪ್ಪಾರ, ಮಹಿಳಾ ಘಟಕ ಅಧ್ಯಕ್ಷೆ ಸುರೇಖಾ, ಹಿರಿಯ ಮುಖಂಡರಾದ ಬಿ.ಗಿರೆಣ್ಣ, ಎಸ್.ಎಲ್.ವೀರೇಶ, ಆದೋನಿ ಅಮರೇಶ, ಡಾ| ಮಾರೆಪ್ಪ, ಎಸ್. ಶ್ರೀನಿವಾಸ, ಭೀಮೇಶ, ಗಿರಿಸಾಗರ, ಡಿ.ನಾರಾಯಣ, ಡಿ.ರಾಮಪ್ಪ, ಶ್ರೀನಿವಾಸಪ್ಪ, ಪ್ರವೀಣ ಬಾಲಚೇಡ, ನವಲಕಲ್ ಶ್ರೀನಿವಾಸ, ಆದಿರಾಜ, ಎ. ಶ್ರೀನಿವಾಸ, ಜನಾರ್ದನ, ಗಧಾರ ವೆಂಕಟಸ್ವಾಮಿ ಇತರರು ಇದ್ದರು.