ಫೆಬ್ರವರಿ ಅಂತ್ಯದಲ್ಲಿ ಕಾಂಗ್ರೆಸ್ ಪ್ರಣಾಳಿಕೆ
Team Udayavani, Jan 18, 2019, 12:30 AM IST
ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯು ಫೆಬ್ರವರಿ ಅಂತ್ಯದೊಳಗೆ ಸಿದ್ಧವಾಗಲಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ನಿರುದ್ಯೋಗ ಹಾಗೂ ಕೃಷಿಕರ ಸಮಸ್ಯೆ ಸಹಿತ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪಕ್ಷವು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಅದರ ಆಧಾರದಲ್ಲಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ದೇಶಾದ್ಯಂತ ಹಲವು ಸುತ್ತುಗಳ ಸಮಾಲೋಚನೆ ನಡೆಸಲಾಗುತ್ತಿದೆ. ದೇಶದ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಆರ್ಬಿಐ ನಿವೃತ್ತ ಗವರ್ನರ್ ರಘುರಾಂ ರಾಜನ್ ಅವರೂ ಕೆಲವೊಂದು ಸಲಹೆಗಳನ್ನು ನೀಡಲಿದ್ದು, ಅವುಗಳನ್ನೂ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು.
ದೇಶದ 60 ಪ್ರದೇಶಗಳಲ್ಲಿ 150 ಸಮಾಲೋಚನೆಗಳನ್ನು ನಡೆ ಸಿದ ಬಳಿಕ ಪ್ರಣಾಳಿಕೆ ಹೊರ ತರಲಾಗುವುದು ಎಂದೂ ನಾಯಕರು ಹೇಳಿದ್ದಾರೆ. ಈಗಾಗಲೇ ಪಕ್ಷವು ಆನ್ಲೈನ್ನಲ್ಲಿ 10 ಸಾವಿರ ಪ್ರತಿಕ್ರಿಯೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ಕಾಂಗ್ರೆಸ್ನ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದಾರೆ.