ಕೈ-ದಳಕ್ಕೆ ದೂರವಾಗದ ಆಪರೇಷನ್ ಆತಂಕ
Team Udayavani, Feb 3, 2019, 1:47 AM IST
ಬೆಂಗಳೂರು: ಬಜೆಟ್ ಅಧಿವೇಶನ ಹತ್ತಿರವಾಗುತ್ತಿದ್ದಂತೆ ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಮತ್ತೆ ಆಪರೇಷನ್ ಕಮಲ ಕಾರ್ಯಾಚರಣೆಯ ಆತಂಕ ಎದುರಾಗಿದೆ. ರಮೇಶ್ ಜಾರಕಿಹೊಳಿ, ನಾಗೇಂದ್ರ ಸೇರಿ ಆರು ಶಾಸಕರು ಮುಂಬೈನಲ್ಲಿದ್ದಾರೆ. ಅತೃಪ್ತ ಶಾಸಕರ ಜತೆಗೆ ಕಂಪ್ಲಿ ಗಣೇಶ್ ಸಹ ಸೇರಿಕೊಂಡಿದ್ದು, ಇನ್ನೂ ಹತ್ತು ಶಾಸಕರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಸೆಳೆಯುವ ಪ್ರಯತ್ನ ನಡೆಯುತ್ತಿದೆ.
ಬಿಜೆಪಿ ಮೇಲ್ನೋಟಕ್ಕೆ ‘ಆಪರೇಷನ್ ಕಮಲ’ಕ್ಕೆ ನಾವು ಕೈ ಹಾಕಿಲ್ಲ ಎಂದು ಹೇಳುತ್ತಿದೆಯಾದರೂ 16 ಶಾಸಕರು ರಾಜೀನಾಮೆ ನೀಡಿದರೆ ಕೈ ಕಟ್ಟಿ ಕೂರುವುದಿಲ್ಲ ಎಂದು ಹೇಳುತ್ತಿದೆ. ಹೀಗಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಬಿಜೆಪಿ ತೆಕ್ಕೆಗೆ ಯಾವ ಶಾಸಕರೂ ಹೋಗದಂತೆ ತಡೆಯುವ ಕಾರ್ಯತಂತ್ರ ರೂಪಿಸುತ್ತಿವೆ. ಫೆ.6ರಂದು ಜಂಟಿ ಅಧಿವೇಶನ ನಡೆಯಲಿದ್ದು, ಅದೇ ದಿನ ಅಥವಾ ಮರುದಿನ ಕಾಂಗ್ರೆಸ್,ಜೆಡಿಎಸ್ ಜಂಟಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಅಲ್ಲಿ ಶಾಸಕರ ಸಮಸ್ಯೆಗಳ ಕುರಿತು ಸಿಎಂಗೆ ಹೇಳಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಫೆ.8ರಂದು ಬಜೆಟ್ ಮಂಡನೆಯಾಗಲಿದೆ.