ಕೆಟಿಎಸ್ ಮನೆ ಎದುರು ಅಂಬರೀಶ್ ಅಭಿಮಾನಿಗಳ ಪ್ರತಿಭಟನೆ
Team Udayavani, Feb 6, 2019, 1:06 AM IST
ಮಂಡ್ಯ: ಸುಮಲತಾ ಅಂಬರೀಶ್ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಗೌಡ್ತಿ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ನಿವಾಸದ ಎದುರು ಅಂಬರೀಶ್ ಅಭಿಮಾನಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಸುಭಾಷ್ ನಗರದಲ್ಲಿರುವ ಕೆ.ಟಿ.ಶ್ರೀಕಂಠೇಗೌಡರ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಇದರ ನಡುವೆಯೂ ಅಂಬರೀಶ್ ಅಭಿಮಾನಿಗಳು ಕೆಟಿಎಸ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಅದನ್ನು ತಡೆದರು. ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಶ್ರೀಕಂಠೇಗೌಡರ ನಿವಾಸದ ಎದುರು ಜಮಾಯಿಸಿದ ಅಭಿಮಾನಿಗಳು, ಶ್ರೀಕಂಠೇಗೌಡರ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ, ಭಾರತೀನಗರದ ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಜಮಾಯಿಸಿದ ಅಂಬರೀಶ್ ಅಭಿಮಾನಿಗಳು, ಮದ್ದೂರು-ಮಳವಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.