ಶಾಸಕರ ಮನೆ ಮೇಲೆ ಕಲ್ಲು ತೂರಾಟ: ಪ್ರತಿಭಟನೆ
Team Udayavani, Feb 16, 2019, 7:27 AM IST
ತಿ.ನರಸೀಪುರ: ಹಾಸನ ಶಾಸಕ ಪ್ರೀತಂ ಜೆ.ಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿ, ಬೆಂಬಲಿಗನ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಬಿಜೆಪಿ ಮುಖಂಡರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟಿಸಿದರು.
ಪಟ್ಟಣದ ತಾಲೂಕು ಕಚೇರಿ ಮಿನಿ ವಿಧಾನಸೌಧದ ಮುಂಭಾಗ ಸೇರಿದ ಮುಖಂಡರು, ಕಾರ್ಯಕರ್ತರು, ಮುಖ್ಯ ಮಂತ್ರಿ ಕುಮಾರಸ್ವಾಮಿ, ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವರುಣಾ ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಮಾತನಾಡಿ, ಶಾಸಕರೊಬ್ಬರ ಮನೆ ಮೇಲೆ ದಾಳಿ ನಡೆಸಿ, ಕಲ್ಲು ತೂರಾಟ ಮಾಡಿರುವುದು ಖಂಡನೀಯ ಎಂದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ರೇವಣ್ಣ ಗೂಂಡಾಗಿರಿಗೆ ಕುಮ್ಮಕ್ಕು ನೀಡುವ ಮೂಲಕ ತಮ್ಮಲ್ಲಿನ ಹೀನ ಸಂಸ್ಕೃತಿ ಪ್ರದರ್ಶಿಸಿದ್ದಾರೆ. ಇಂತಹ ಜನ ವಿರೋಧಿ ಸರ್ಕಾರ ಕಿತ್ತೂಗೆಯಬೇಕಾಗಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಕೆ.ಎಸ್.ಬಸವರಾಜು, ಸ್ಲಂ ಮೋರ್ಚಾಧ್ಯಕ್ಷ ಕೆ.ಗಣೇಶ್, ದಯಾ ನಂದ ಪಟೇಲ್, ಮುಖಂಡರಾದ ಎನ್.ಲೋಕೇಶ್, ಯೋಗೇಶ್, ಕಾರ್ ಮಲ್ಲಪ್ಪ, ಬಿ.ಮಹೇಶ್, ಎಂ.ಮೋಹನ್, ದೀಪು, ರಘು, ಮಹೇಶ್, ಸ್ವಾಮಿ, ಹುಳಿಮಾವು ಮಹೇಂದ್ರ, ತುಂಬಲ ನಂದೀಶ್ ಭಾಗವಹಿಸಿದ್ದರು.