ಪುಲ್ವಾಮಾ ತನಿಖೆಗೆ ಮಾರುತಿ ಎಂಜಿನಿಯರ್ಗಳ ಸಹಾಯ
Team Udayavani, Feb 21, 2019, 12:30 AM IST
ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಉಗ್ರರ ಸುಳಿವಿಗಾಗಿ ಈಗ ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನಿಖೆ ನಡೆಸುತ್ತಿದ್ದು, ಇದಕ್ಕೆ ಮಾರುತಿ ಸುಜುಕಿ ಕಂಪೆನಿಯ ಎಂಜಿನಿಯರುಗಳನ್ನೂ ಬಳಸಿಕೊಂಡಿದೆ. ಸ್ಫೋಟದಲ್ಲಿ ಮಾರುತಿ ಈಕೋ ವಾಹನ ಬಳಸಲಾಗಿದ್ದು, ಇದರ ನಂಬರ್ ಪ್ಲೇಟ್ ದಾಳಿ ಸ್ಥಳದಲ್ಲಿ ಸಿಕ್ಕಿದೆ. ಈ ವಾಹನವನ್ನು ಯಾವ ವರ್ಷ ಉತ್ಪಾದಿಸಿದ್ದು ಹಾಗೂ ಯಾರ ಒಡೆತನದಲ್ಲಿತ್ತು ಎಂಬ ಮಾಹಿತಿಯನ್ನು ಕಲೆಹಾಕಲು ಮಾರುತಿ ಸುಜುಕಿ ಎಂಜಿನಿಯರುಗಳು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್ನೊಂದೆಡೆ ಜೈಶ್ ಎ ಮೊಹಮ್ಮದ್ ಉಗ್ರ ಮುದಸ್ಸಿರ್ ಅಹಮದ್ ಖಾನ್ ಪಾತ್ರವೂ ಈ ದಾಳಿಯಲ್ಲಿದೆ ಎನ್ನಲಾಗಿದ್ದು, ಇದಕ್ಕೆ ಸೂಕ್ತ ಸುಳಿವಿಗಾಗಿ ಹುಡುಕಾಟ ನಡೆದಿದೆ.
ಎನ್ಐಎ ತನಿಖೆ ಆರಂಭ: ಪುಲ್ವಾಮಾ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೈಗೆತ್ತಿಕೊಂಡಿದೆ. ಜತೆಗೆ ಪ್ರಕರಣದ ಬಗ್ಗೆ ಹೊಸತಾಗಿ ಕೇಸು ದಾಖಲಿಸಿಕೊಂಡಿದೆ. ಎನ್ಐಎ ಮಹಾ ನಿರ್ದೇಶಕ ವೈ.ಸಿ.ಮೋದಿ, ಇತರ ಅಧಿಕಾರಿಗಳು ಅವಂತಿಪೊರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎನ್ಐಎ ಈಗಾಗಲೇ ಸ್ಫೋಟಕಗಳ ಮಾದರಿ ಮತ್ತು ಇತರ ಅಂಶಗಳನ್ನು ಸಂಗ್ರಹಿಸಿದೆ. ಘಟನೆಗೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದೆ. ಗುಪ್ತಚರ ಸಂಸ್ಥೆಯ ಕೆಲ ಅಧಿಕಾರಿಗಳನ್ನೂ ಅದು ಭೇಟಿ ಮಾಡಿದೆ. ಇದುವರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅದರ ಹೊಣೆ ವಹಿಸಿಕೊಂಡಿದ್ದರು.
ಯೋಧ ಹುತಾತ್ಮ
ಕಳೆದ ವಾರ ಪುಲ್ವಾಮಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಗಾಯಗೊಂಡಿದ್ದ ಯೋಧ ಸಂದೀಪ್ ಕುಮಾರ್ ಬುಧವಾರ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. ಇವರು ಹರ್ಯಾಣದ ಫರೀದಾಬಾದ್ನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.