ದೇಶದ ತಲೆಬಾಗಲು ಬಿಡುವುದಿಲ್ಲ; ದಾಳಿ ಬಗ್ಗೆ ಮೋದಿ ಹೇಳಿದ್ದೇನು?
Team Udayavani, Feb 26, 2019, 8:55 AM IST
ರಾಜಸ್ಥಾನ್: ಭಾರತ್ ಮಾತಾ ಕಿ ಜೈ ಎಂದು ರಾಜಸ್ತಾನದ ಚುರುವಿನಲ್ಲಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ದೇಶ ಸೇನೆಯ ಸುರಕ್ಷಿತ ಕೈಗಳಲ್ಲಿದೆ. ನಾವೆಲ್ಲರೂ ಪರಾಕ್ರಮಿ ಯೋಧರಿಗೆ ನಮನ ಸಲ್ಲಿಸೋಣ ಎಂದು ಹೇಳುವ ಮೂಲಕ ಮಂಗಳವಾರ ಮುಂಜಾನೆ ಶತ್ರು ದೇಶದೊಳಗೆ ನುಗ್ಗಿ ಭಾರತೀಯ ವಾಯುಪಡೆ ಯೋಧರು ನಡೆಸಿದ ದಾಳಿ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಯಾವತ್ತೂ ದೇಶವನ್ನು ತಲೆತಗ್ಗಿಸುವಂತೆ ಮಾಡಲು ಅವಕಾಶ ನೀಡಲ್ಲ. ಚುರು ನೆಲದಲ್ಲಿ ಈ ಹಿಂದೆ ಹೇಳಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಭಾರತ ಮಾತೆಗೆ ನಾನು ಮಾತು ಕೊಡುತ್ತಿದ್ದೇನೆ. ಭಾರತ ಮಾತೆ ಎಂದಿಗೂ ತಲೆ ತಗ್ಗಿಸುವಂತೆ ಮಾಡಲ್ಲ ಎಂದು ಹೇಳಿದರು.
ನಿಂತಲ್ಲಿ ನಿಲ್ಲಲು ಬಿಡುವುದಿಲ್ಲ, ದೇಶವನ್ನು ತಲೆ ಬಾಗಲು ಬಿಡುವುದಿಲ್ಲ. ನಮ್ಮ ದೇಶಕ್ಕಿಂತ ಮುಖ್ಯ ಇನ್ನೇನು ಇಲ್ಲ. ದಾರಿ ತಪ್ಪುವುದಿಲ್ಲ, ಭಾರತ ದೇಶ ಯಾವತ್ತಿಗೂ ಶರಣಾಗಲು ಬಿಡುವುದಿಲ್ಲ. ನನಗೆ ದೇಶಕ್ಕಿಂತ ಹೆಚ್ಚು ಇನ್ನಾವುದೇ ವಿಚಾರ ಇಲ್ಲ ಎಂದು ತಿಳಿಸಿದರು.
ದೇಶದ ಜನರ ಸೇವೆ ಮಾಡುವುದೇ ನನಗೆ ಎಲ್ಲಕ್ಕಿಂತ. ದೇಶದ ಪ್ರತಿಯೊಬ್ಬರಿಗಾಗಿ ನಾವು ದುಡಿಯುತ್ತಿದ್ದೇವೆ. ಜೈಜವಾನ್, ಜೈಕಿಸಾನ್ , ಜೈ ವಿಜ್ಞಾನ್ ಎಂದು ನೆನಪಿಸಿಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ಮೋದಿ ಹೇಳಿದರು.