ಅತೃಪ್ತರ ಜತೆ ಸಿಎಂ ಸಂಧಾನ
Team Udayavani, Mar 7, 2019, 12:30 AM IST
ಬೆಂಗಳೂರು: ಆಪರೇಷನ್ ಕಮಲದ ಭೀತಿ ಆಡಳಿತ ಪಕ್ಷದ ನಾಯಕರನ್ನು ಇನ್ನೂ ಬಿಟ್ಟಿಲ್ಲ. ರಾಜೀನಾಮೆ ನೀಡಿರುವ ಚಿಂಚೋಳಿ ಶಾಸಕ ಉಮೇಶ್ ಜಾಧವ್, ಬಿಜೆಪಿ ಸೇರುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಕಾಂಗ್ರೆಸ್ನಲ್ಲಿರುವ ಅತೃಪ್ತರ ಸಮಾಧಾನಕ್ಕೆ ಮುಂದಾಗಿದ್ದಾರೆ. ಯಾವುದೇ ರೀತಿಯ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸಿಎಂ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಉಮೇಶ್ ಜಾಧವ್ ಜತೆಗೆ ಇನ್ನೆರಡು ದಿನಗಳಲ್ಲಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಹಾಗೂ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಕೂಡ ರಾಜೀನಾಮೆ ನೀಡಲಿದ್ದಾರೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ರಮೇಶ್ ಜಾರಕಿಹೊಳಿ ನಿವಾಸದಲ್ಲೇ ಬುಧವಾರ ಸಮಾಲೋಚನೆ ನಡೆಸಿದ್ದಾರೆ.ಅತೃಪ್ತ ಶಾಸಕರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಲೋಕಸಭೆ ಚುನಾವಣೆಯ ನಂತರ ರಾಜಕೀಯ ಚಿತ್ರಣ ಬದಲಾಗಲಿದ್ದು, ರಮೇಶ್ ಜಾರಕಿಹೊಳಿ ಹಾಗೂ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎನ್ನಲಾ ಗಿದೆ.
ಕೈ ನಾಯಕರನ್ನು ನೆಚ್ಚಿ ಕೂರದೆ ಕುಮಾರಸ್ವಾಮಿಯೇ ನೇರವಾಗಿ ಅತೃ ಪ್ತ ರ ನ್ನು ಸಮಾಧಾನ ಪಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ರಾಜ ಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಬಿಜೆಪಿಯ ಅನೇಕ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ ಎರಡೆರಡು ಬಾರಿ ಭೇಟಿ ಅದಕ್ಕೆಲ್ಲ ಬೇರೆ ಅರ್ಥ ಕಲ್ಪಿಸಲು ಆಗುವುದಿಲ್ಲ. ಮಂಡ್ಯ ಚುನಾವಣೆಯ ಬಗ್ಗೆ ತಲೆ ಕೆಡೆಸಿಕೊಳ್ಳಬೇಡಿ ಎಂದು ಹೇಳಿ ನಿರ್ಗಮಿಸಿದರು.
ಅತೃಪ್ತರಿಗೆ ಲೋಕ ಟಿಕೆಟ್?: ಉಮೇಶ್ ಜಾಧವ್ಗೆ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗುವುದು ಬಹತೇಕ ಖಚಿತವಾಗಿದೆ. ಅದೇ ರೀತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ನಾಗೇಂದ್ರ ಅವರನ್ನು ಪಕ್ಷಕ್ಕೆ ಸೆಳೆದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ಚಿಕ್ಕೋಡಿ ಕ್ಷೇತ್ರ ಹಾಗೂ ನಾಗೇಂದ್ರ ಅಥವಾ ಅವರ ಸಹೋದರ ಪ್ರಸಾದ್ ಅವರಿಗೆ ಬಳ್ಳಾರಿ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಬಿಜೆಪಿಯವರೊಂದಿಗೆ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ.
ನನ್ನ ಹಾಗೂ ಕುಮಾರಸ್ವಾಮಿ ಸಂಬಂಧ ಇವತ್ತಿನದ್ದಲ್ಲ. ಮುಖ್ಯಮಂತ್ರಿ ಮೇಲೆ ನನಗೆ ಬೇಸರವಿಲ್ಲ. ಕಾಂಗ್ರೆಸ್ನಲ್ಲಿ ಈಗಲೂ ಅಸಮಾಧಾನ ಇದೆ. ಆದರೆ, ರಾಜೀನಾಮೆ ಕೊಡುವುದಿಲ್ಲ.
● ರಮೇಶ್ ಜಾರಕಿಹೊಳಿ, ಗೋಕಾಕ್ ಶಾಸಕ.
ರಾಜಕೀಯಕ್ಕಿಂತ ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ. ನನ್ನ ಸಹೋದರನಿಗೆ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಚರ್ಚೆಯಾಗಿಲ್ಲ. ನನ್ನ ಸಹೋದರ ಬಿಜೆಪಿಗೆ ಹೋದರೆ ಅವನೊಂದಿಗೆ ಮಾತನಾಡಲ್ಲ.ನನಗೂ ಅವನಿಗೂ ಸಂಬಂಧ ಇರುವುದಿಲ್ಲ.
● ಬಿ. ನಾಗೇಂದ್ರ, ಬಳ್ಳಾರಿ ಗ್ರಾಮೀಣ ಶಾಸಕ.
ರಾಜಕೀಯ ಚರ್ಚೆ ಇಲ್ಲ
ಶಾಸಕರ ಭೇಟಿಯ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ನಾನು ರಾಜಕೀಯ ಚರ್ಚೆ ಮಾಡಲು ಬಂದಿರಲಿಲ್ಲ. ಅವರ ಕ್ಷೇತ್ರದ ಮತ್ತು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಂದಿದ್ದೆ. ತಿಂಡಿ ತಿನ್ನಲು ಕರೆದಿದ್ದರು. ಒಳ್ಳೆಯ ತಿಂಡಿ ಕೊಟ್ಟಿದ್ದಾರೆ. ಅವರನ್ನು ಮನವೊಲಿಸಲು ಸಮಸ್ಯೆ ಏನೂ ಇಲ್ಲ. ಸ್ಥಳೀಯ ಮಟ್ಟದ ಸಮಸ್ಯೆಗಳಿವೆ ಅವುಗಳನ್ನು ಕಾಂಗ್ರೆಸ್ ನಾಯಕರು ಬಗೆಹರಿಸುತ್ತಾರೆ ಎಂದು ಹೇಳಿದರು.