ಸೇಬು ವ್ಯಾಪಾರಿಯ ಅಪಹರಿಸಿದ ಮೂವರ ಸೆರೆ
Team Udayavani, Mar 21, 2019, 7:26 AM IST
ಬೆಂಗಳೂರು: ಸೇಬು ವ್ಯಾಪಾರಿಯನ್ನು ಅಪಹರಣ ಮಾಡಿ 64 ಲಕ್ಷ ರೂ. ಚೆಕ್ಗೆ ಸಹಿ ಮಾಡಿಸಿಕೊಂಡ ಮೂವರು ಆರೋಪಿಗಳನ್ನು ಸಿಟಿ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಮೊಹಮ್ಮದ್ ತರಬೇಜ್ (33) ಹಾಗೂ ಆತನ ಇಬ್ಬರು ಸಹಚರರು ಬಂಧಿತರು. ಆರೋಪಿಗಳು ಮಾ.16ರಂದು ರಾತ್ರಿ 10.30ರ ಸುಮಾರಿಗೆ ಕಲಾಸಿಪಾಳ್ಯ ನಿವಾಸಿ ಪೆರಿಯಾ ಸ್ವಾಮಿಯನ್ನು ಅಪಹರಿಸಿದ್ದರು ಎಂದು ಪೊಲೀಸರು ಹೇಳಿದರು.
ಅಪಹರಣಕ್ಕೊಳಗಾದ ಪೆರಿಯಾ ಸ್ವಾಮಿ ಹಾಗೂ ಆರೋಪಿ ಮೊಹಮ್ಮದ್ ತಬರೇಜ್ ಇಬ್ಬರು ಸೇಬು ವ್ಯಾಪಾರ ಮಾಡುತ್ತಾರೆ. ಕೆಲ ತಿಂಗಳ ಹಿಂದೆ ಪೆರಿಯಾಸ್ವಾಮಿ ತಬರೇಜ್ನಿಂದ 64 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ಆದರೆ, ನಿಗದಿತ ಸಮಯಕ್ಕೆ ವಾಪಸ್ ಕೊಟ್ಟಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ತಬರೇಜ್ ತನ್ನ ಮೂವರು ಸಹಚರರ ಜತೆ ಮಾ.16ರಂದು ರಾತ್ರಿ 10.30ಕ್ಕೆ ಸಿಟಿ ಮಾರುಕಟ್ಟೆಯ ಎಸ್.ಆರ್.ರಸ್ತೆಯಲ್ಲಿ ನಿಂತಿದ್ದ ಪೆರಿಯಾಸ್ವಾಮಿ ಅವರನ್ನು ಆರೋಪಿಗಳು ಕಾರಿನಲ್ಲಿ ಅಪಹರಣ ಮಾಡಿದ್ದರು.
ತಬರೇಜ್, ಪೆರಿಯಾಸ್ವಾಮಿಯನ್ನು ಗೃಹ ಬಂಧನಲ್ಲಿಟ್ಟಿದ್ದ. ನಂತರ ಹಿರಿಯೂರಿ ನಲ್ಲಿರುವ ದಾಳಿಂಬೆ ತೋಟವೊಂದಕ್ಕೆ ಕರೆದುಕೊಂಡು ಹೋಗಿ ಪ್ರಾಣ ಬೆದರಿಕೆ ಹಾಕಿದ್ದಾರೆ. ನಂತರ ಮತ್ತೆ ಎಲೆಕ್ಟ್ರಾನಿಕ್ ಸಿಟಿಗೆ ಕರೆತಂದ ಆರೋಪಿಗಳು ಪೆರಿಯಾಸ್ವಾಮಿ ಬಳಿಯಿದ್ದ ಎರಡು ಚೆಕ್ಗಳಿಗೆ 64 ಲಕ್ಷ ರೂ. ಮೊತ್ತ ನಮೂದಿಸಿಕೊಂಡು ಸಹಿ ಪಡೆದುಕೊಂಡು ಕಳುಹಿಸಿದ್ದರು.