ಕೆಸರೆರಚಾಟದ ಬಳಿಕ ಈಗ ಕಲ್ಲು ತೂರಾಟದ ಸರದಿ
Team Udayavani, Mar 24, 2019, 11:41 AM IST
ದರ್ಶನ್ ಚಾಲೆಂಜಿಂಗ್ ಸ್ಟಾರ್ ಕಣ್ರೀ: ಸುಮಲತಾ
ಭಾರತೀನಗರ: ವಿರೋಧಿಗಳ ಕುತಂತ್ರ ರಾಜಕಾರಣಕ್ಕೆ ದರ್ಶನ್ ಹೆದರುವುದಿಲ್ಲ. ಅವರ ಹೆಸರೇ ಚಾಲೆಂಜಿಂಗ್ ಸ್ಟಾರ್ ಎಂದು ಸುಮಲತಾ ಪ್ರತಿಕ್ರಿಯಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ನನಗೆ ಸಿಕ್ಕಿರುವ ಜನಬೆಂಬಲ ನೋಡಿ ಬಹುಶಃ ಅವರು ಹೆದರಿರುವಂತೆ ಕಾಣುತ್ತಿದೆ. ಅದಕ್ಕಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿರಬಹುದು. ಕಲ್ಲು ತೂರಾಟ ನಡೆಸುವುದಕ್ಕೆ ಇನ್ನೇನು ಕಾರಣವಿದೆ.
ಉದ್ದೇಶಪೂರ್ವಕವಾಗಿಯೇ ಇದನ್ನು ನಡೆಸಲಾಗಿದೆ. ಈ ಕುತಂತ್ರ ರಾಜಕಾರಣಕ್ಕೆಲ್ಲ ದರ್ಶನ್ ಮತ್ತು ಯಶ್ ಹೆದರುವುದಿಲ್ಲ. ಅವರನ್ನು ಬೆದರಿಸಿ ಪ್ರಚಾರಕ್ಕೆ ಬರುವುದನ್ನು ತಡೆಯಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಅವರು ಇದನ್ನು ಚಾಲೆಂಜ್ ಆಗಿ ತೆಗೆದುಕೊಳ್ತಾರೆ ಎಂದು ವಿಶ್ವಾಸ ದಿಂದ ನುಡಿದರು.
ನನಗೆ ನೇರ ಹೋರಾಟ ಎಂದರೆ ಇಷ್ಟ. ಹಿಂಬಾಗಿಲಿನಿಂದ ಹೋರಾಟ ನಡೆಸೋದು, ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವುದು ಸರಿಯಲ್ಲ ಎನಿಸುತ್ತದೆ. ಯುದ್ಧದಲ್ಲೂ ಒಂದಷ್ಟು ಧರ್ಮವಿದೆ. ಯಾರೇ ಆಗಲಿ ಅದನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಚುನಾವಣ ಗಿಮಿಕ್
ನಿಖೀಲ್ ಬೆಂಬಲಿಗರ ಕಾರಿನ ಮೇಲೆ ಕಲ್ಲು ತೂರಿದ್ದಕ್ಕೆ ಪ್ರತಿಕ್ರಿಯಿಸಿದ ಸುಮಲತಾ ನಮ್ಮ ಕಾರ್ಯಕರ್ತರು ಯಾರೂ ಆ ರೀತಿ ಕೆಲಸ ಮಾಡೋಲ್ಲ. ಇದು ಜನರ ಅನುಕಂಪ ಪಡೆಯಲು ಅವರೇ ಮಾಡಿ ಕೊಂಡಿರುವ ತಂತ್ರಗಾರಿಕೆ. ನಾನು ಯಾವತ್ತೂ ನಮ್ಮ ಬೆಂಬಲಿಗರಿಗಾಗಲಿ, ಅಭಿಮಾನಿಗಳಿಗಾಗಲಿ ಆ ರೀತಿ ಪ್ರಚೋದನೆ ನೀಡಿಲ್ಲ. ಚುನಾವಣ ಗಿಮಿಕ್ಗಾಗಿ ಅವರೇ ಈ ರೀತಿ ಮಾಡಿಕೊಳ್ಳುತ್ತಿರಬಹುದು ಎಂದರು.
ಹುಡುಗಾಟ ಆಡೋಕೆ ಬಂದಿಲ್ಲ: ನಿಖೀಲ್
ಪಾಂಡವಪುರ: ನನಗೆ ವಯಸ್ಸು ಚಿಕ್ಕದು, ಮತ್ತೆ ಅನುಭವ ಕೂಡ ಕಡಿಮೆ ಇರಬಹುದು. ಆದರೆ ಅತ್ಯಂತ ಪ್ರಾಮಾಣಿಕವಾಗಿ, ಬದ್ಧತೆ ಯಿಂದ ಕೆಲಸ ಮಾಡಲು ಬಂದಿದ್ದೇನೆ. ಹುಡುಗಾಟ ಆಡೋಕೆ ಬಂದಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಭಾವುಕರಾಗಿ ನುಡಿದರು.
ಚಿತ್ರರಂಗದಲ್ಲಿದ್ದ ನನ್ನನ್ನು ರಾಜಕೀಯಕ್ಕೆ ಕರೆ ತಂದು ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ನೀಡಿರುವ ಜಿಲ್ಲೆಯ ಜನತೆ, ನಾಯಕರು ಮತ್ತು ಕಾರ್ಯಕರ್ತರಿಗೆ ನಾನು ಆಭಾರಿಯಾಗಿರುತ್ತೇನೆ. ಮಂಡ್ಯ ಜಿಲ್ಲೆಯ ಜನತೆ ನನ್ನ ತಾತ ದೇವೇಗೌಡ ಮತ್ತು ನನ್ನ ತಂದೆ ಕುಮಾರಸ್ವಾಮಿಗೆ ಆರ್ಶಿರ್ವದಿಸಿದಂತೆ ನನಗೂ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಒಡೆಯಲು ಎಚ್ಡಿಕೆ ಯತ್ನ
ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೂಲ ಕಾಂಗ್ರೆಸಿಗರು ಮತ್ತು ವಲಸಿಗ ಕಾಂಗ್ರೆಸಿಗರು ಎಂದು ಹೇಳುವ ಮೂಲಕ ಮಂಡ್ಯ ಜಿಲ್ಲಾ ಕಾಂಗ್ರೆಸ್ನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಆವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಮತ್ತು ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಜನತೆಯ ಗೌರವಕ್ಕೆ ಅವರು ಧಕ್ಕೆ ತಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹನಕೆರೆ ಶಶಿಕುಮಾರ್ ಆರೋಪಿಸಿದರು.
ನಿಖೀಲ್ ಬೆಂಬಲಿಸಿ: ಪುಟ್ಟರಾಜು
ಮಂಡ್ಯ: ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುವವರನ್ನು ಮತದಾರರು ಚುನಾವಣೆಯಲ್ಲಿ ಆಶೀರ್ವದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಮನವಿ ಮಾಡಿದರು
ಮಂಡ್ಯ ಜಿಲ್ಲೆಯ ಜನತೆಯ ಋಣ ತೀರಿಸಬೇಕಾದ ಕರ್ತವ್ಯ ನಮ್ಮ ಮೇಲಿದೆ. ಹಾಗಾಗಿ, ನನ್ನ ತಾಯಿಯನ್ನು ಈ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಬೇಕು
ಅಭಿಷೇಕ್, ದಿ| ಅಂಬರೀಷ್ ಪುತ್ರ