ಪ್ರಕಾಶ್ ಕುಟುಂಬಕ್ಕೆ ಸುಮಲತಾ ಸಾಂತ್ವನ
Team Udayavani, Mar 24, 2019, 1:32 PM IST
ಶ್ರೀರಂಗಪಟ್ಟಣ: ಇತ್ತೀಚೆಗೆ ನಿಧನರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಪ್ರಕಾಶ್ ತಾಯಿ ನಿಂಗಮ್ಮ ಅಂತ್ಯಕ್ರಿಯೆಯಲ್ಲಿ ಕಾರಣಾಂತರದಿಂದ ಪಾಲ್ಗೊಳ್ಳಲಾಗಲಿಲ್ಲ ಎಂದು ಪ್ರಕಾಶ್ ಕುಟುಂಬಕ್ಕೆ ಸುಮಲತಾ ಅಂಬರೀಶ್ ಸಾಂತ್ವನ ಹೇಳಿದರು.
ತಾಲೂಕಿನ ನಗುವನಹಳ್ಳಿ ಗ್ರಾಮಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಸುಮಲತಾ ಅಂಬರೀಶ್ ಪ್ರಕಾಶ್ ಮನೆಯಿಂದ ಹೊರ ಬಂದ ಕೂಡಲೇ ಅಂಬರೀಶ್ ಅಭಿಮಾನಿಗಳು ಜಮಾಯಿಸಿ ಜೈಕಾರ ಕೂಗಿದರು.
ಆದರೆ, ಅಭಿಮಾನಿಗಳಿಗೆ ನಮಸ್ಕರಿಸಿದ ಸುಮಲತಾ, ಇಂದು ಪ್ರಕಾಶ್ ತಾಯಿ ನಿಧನ ಸುದ್ದಿ ಕೇಳಿ ಸಾವಿನ ಮನೆಗೆ ಸಾಂತ್ವನ ಹೇಳಲು ಮಾತ್ರ ಬಂದಿದ್ದೇನೆ. ಚುನಾವಣೆ ಪ್ರಚಾರಕ್ಕೆ ಬಂದಿಲ್ಲ. ಎಲ್ಲರೂ ಶಾಂತಿಯಿಂದ ಇರಬೇಕು ಎಂದು ಕೈ ಮುಗಿದು ಮನವಿ ಮಾಡಿದರು.
ಮಾ.26ರಂದು ಶ್ರೀರಂಗಪಟ್ಟಣ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದು ಆ ಸಮಯದಲ್ಲಿಯೂ ನಿಮ್ಮ ಗ್ರಾಮಕ್ಕೆ ಬಂದು ಪ್ರಚಾರ ನಡೆಸುತ್ತೇವೆ. ಆಗ ಎಲ್ಲರೊಂದಿಗೂ ಸಮಾಲೋಚನೆ ನಡೆಸುತ್ತೇನೆ ಎಂದು ನೆರೆದಿದ್ದ ಸಾರ್ವಜನಿಕರಿಗೆ ನಮಸ್ಕರಿಸಿ, ಮಂಡ್ಯದತ್ತ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಪುತ್ರ ಅಭಿಷೇಕ್ ಅಂಬರೀಶ್, ಮಧುಸೂದನ್, ಅಂಬರೀಶ್ ಆಪ್ತ ಎಸ್.ಎಲ್.ಲಿಂಗರಾಜು, ಪುರಸಭಾ ಸದಸ್ಯ ಸುನಿಲ್, ನಗುವನಹಳ್ಳಿ ವೆಂಕಟೇಶ್, ಟಿ.ಎಂ.ಹೊಸೂರು ಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.