ಬಾಹ್ಯಾಕಾಶ ತ್ಯಾಜ್ಯದ ಬಗ್ಗೆ ಅಮೆರಿಕ, ವಿಶ್ವಸಂಸ್ಥೆ ಕಳವಳ
ಬಾಹ್ಯಾಕಾಶ ತ್ಯಾಜ್ಯ ವಿಲೇವಾರಿಯ ನಿಯಮಾವಳಿ ಪಾಲನೆಗೆ ವಿಶ್ವಸಂಸ್ಥೆ ಸಲಹೆ
Team Udayavani, Mar 29, 2019, 6:17 AM IST
ಹೊಸದಿಲ್ಲಿ: ಶತ್ರುಗಳ ಉಪಗ್ರಹವನ್ನು ಬಾಹ್ಯಾಕಾಶದಲ್ಲೇ ಹೊಡೆದುರುಳಿಸುವ ತಂತ್ರಜ್ಞಾನ ಅಳವಡಿಸಿಕೊಂಡಿರುವುದನ್ನು ಭಾರತ ಜಗಜ್ಜಾಹೀರು ಮಾಡಿದ ಬೆನ್ನಿಗೆ, ಅಮೆರಿಕ ಹಾಗೂ ವಿಶ್ವಸಂಸ್ಥೆ, ಬಾಹ್ಯಾಕಾಶ ತ್ಯಾಜ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
“ಮಿಷನ್ ಶಕ್ತಿ’ (ಉಪಗ್ರಹ ಧ್ವಂಸ ತಂತ್ರಜ್ಞಾನ) ತಂತ್ರಜ್ಞಾನವನ್ನು ಅಳವಡಿಸಿಕೊಂಡ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಿಸಿದ್ದರು. ಇದಕ್ಕೆ ಗುರುವಾರ ಪ್ರತಿಕ್ರಿಯಿಸಿರುವ ಅಮೆರಿಕ, “ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದೊಂದಿಗಿನ ಬಾಂಧವ್ಯ ಹಾಗೂ ಸಹಕಾರಗಳನ್ನು ಅಮೆರಿಕ ಎಂದೆಂದಿಗೂ ಗೌರವಿಸುತ್ತದೆ. ಆದರೆ, ಭಾರತದ ಇತ್ತೀಚಿನ ನಡೆಯಿಂದ ಉಂಟಾಗಿರುವ ಬಾಹ್ಯಾಕಾಶ ತ್ಯಾಜ್ಯದ ಬಗ್ಗೆ ಕಳವಳ ಉಂಟಾಗಿದೆ’ ಎಂದು ಹೇಳಿದೆ.
ಇನ್ನು, ವಿಶ್ವಸಂಸ್ಥೆಯ ನಿಶ್ಶಸ್ತ್ರೀಕರಣ ಸಂಶೋಧನಾ ಸಂಸ್ಥೆ (ಯುಎನ್ಐಡಿಐಆರ್) ಸಹ ಇದೇ ಮಾದರಿಯ ಆತಂಕ ವ್ಯಕ್ತಪಡಿಸಿದ್ದು, “ಉಪಗ್ರಹಗಳನ್ನು ಧ್ವಂಸ ಮಾಡುವ ತಂತ್ರಜ್ಞಾನ ಹೊಂದುವ ದೇಶ ಬಾಹ್ಯಾಕಾಶ ತ್ಯಾಜ್ಯಗಳ ನಿಗ್ರಹದ ಬಗ್ಗೆ ರೂಪಿಸಲಾಗಿರುವ ನಿಯಮಾವಳಿಗಳನ್ನು ಪಾಲಿಸಬೇಕು. ನಿಯಮಗಳನ್ನು ಪಾಲಿಸುವುದರಿಂದ ಇತರ ದೇಶಗಳ ಉಪಗ್ರಹಗಳಿಗೆ ಆಗುವ ತೊಂದರೆಯನ್ನು ಹಾಗೂ ಇತರ ದೇಶಗಳಲ್ಲಿ ಉಂಟಾಗುವ ಕಳವಳಗಳನ್ನು ತಪ್ಪಿಸಬಹುದು’ ಎಂದು ಹೇಳಿದೆ. ಈ ಕುರಿತು ಬುಧವಾರವೇ ಸ್ಪಷ್ಟನೆ ನೀಡಿದ್ದ ಭಾರತದ ವಿದೇಶಾಂಗ ಇಲಾಖೆ, “ಪರೀಕ್ಷೆಯನ್ನು ಕೆಳಮಟ್ಟದಲ್ಲಿ ಮಾಡಲಾಗಿದ್ದು, ಬಹುತೇಕ ತ್ಯಾಜ್ಯಗಳು ಕ್ರಮೇಣ ಕೆಲವು ವಾರಗಳಲ್ಲೇ ಭೂಮಿಗೆ ಬೀಳಲಿವೆ’ ಎಂದು ಹೇಳಿದೆ.