ಡೈರಿ ಬರೆಯಲು ಹೊರಟ ಮಾನ್ವಿತಾ
ಬೇವು-ಬೆಲ್ಲ ಹಬ್ಬಕ್ಕೆ ರಾಜಸ್ಥಾನ್ ಡೈರೀಸ್ ಶುರು
Team Udayavani, Apr 2, 2019, 5:00 AM IST
“ಟಗರು’ ಖ್ಯಾತಿಯ ಪುಟ್ಟಿ ಎಂದೇ ಹೆಸರಾಗಿರುವ ಮಾನ್ವಿತಾ ಕಾಮತ್ “ರಾಜಸ್ಥಾನ್ ಡೈರೀಸ್’ ಎಂಬ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಆದರೆ, ಆ ಚಿತ್ರಕ್ಕೆ ಯಾವಾಗ ಚಾಲನೆ ಸಿಗಲಿದೆ ಎಂಬುದಕ್ಕೆ ಉತ್ತರ ಸಿಕ್ಕಿರಲಿಲ್ಲ.
ಈಗ ಹೊಸ ಸುದ್ದಿಯೆಂದರೆ, ಯುಗಾದಿ ಹಬ್ಬದಂದು ಆ ಚಿತ್ರಕ್ಕೆ ಮುಹೂರ್ತ ನೆರವೇರಲಿದ್ದು, ಅಂದಿನಿಂದಲೇ ಚಿತ್ರತಂಡ ಚಿತ್ರೀಕರಣವನ್ನು ಪ್ರಾರಂಭಿಸಲಿದೆ. ಚಿತ್ರದ ಮೊದಲ ಹಂತದ ಚಿತ್ರೀಕರಣ ರಾಜಸ್ಥಾನದಲ್ಲಿ ಶುರುವಾಗಲಿದ್ದು, ನಂತರ ಮುಂಬೈ ಮತ್ತು ಕರ್ನಾಟಕದ ಇತರ ಸ್ಥಳಗಳಲ್ಲಿ ನಡೆಯಲಿದೆ ಎಂಬುದು ವಿಶೇಷ.
ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ “ರಾಜಸ್ಥಾನ್ ಡೈರೀಸ್’ ಚಿತ್ರವನ್ನು ಮುಂಬೈ ಮೂಲದ “ಸಿನೆಮಂತ್ರ ಎಂಟರ್ಟೈನ್ಮೆಂಟ್ ಮತ್ತು ಮೀಡಿಯಾ’ ಬ್ಯಾನರ್ ಮೂಲಕ ಶಾಲಿನಿ ಜೀತೇಂದ್ರ ಠಾಕ್ರೆ ನಿರ್ಮಿಸುತ್ತಿದ್ದಾರೆ.
2017ರಲ್ಲಿ “ರಾಜು ಎದೆಗೆ ಬಿದ್ದ ಅಕ್ಷರ’ ಕನ್ನಡ ಮಕ್ಕಳ ಚಿತ್ರದ ಅತ್ಯುತ್ತಮ ಕಥೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದ ನಂದಿತಾ ಯಾದವ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. “ರಾಜಸ್ಥಾನ್ ಡೈರೀಸ್’ ಚಿತ್ರದಲ್ಲಿ ಮಾನ್ವಿತಾಗೆ ನಾಯಕನಾಗಿ ರಂಗಭೂಮಿ ನಟ ಸುಮುಖ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.
ಉಳಿದಂತೆ ವರ್ಜಿನಿಯ, ಖುಶ್ಬೂ, ಸುಮಿತ್ ರಾಘವನ್, ನಾಡಿಯಾ, ರಾಜೇಶ್ ನಟರಂಗ, ಚಿನ್ಮಯ್ ಮಂಡಲೇಕರ್, ಸುಷ್ಮಾ ನಾಣಯ್ಯ, ಅರುಣ್ ಸಾಗರ್, ಸಂದೀಪ್ ಪಾಠಕ್, ಸುದೀಪ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಚಿತ್ರದ ಮತ್ತೂಂದು ವಿಶೇಷ ಪಾತ್ರಕ್ಕೆ ಬಾಲಿವುಡ್ನ ಖ್ಯಾತ ನಟರೊಬ್ಬರನ್ನು ಕರೆತರುವ ಯೋಚನೆ ಚಿತ್ರತಂಡಕ್ಕಿದೆ. ಇನ್ನು “ರಾಜಸ್ಥಾನ್ ಡೈರೀಸ್’ ಚಿತ್ರದಲ್ಲಿ ನಾಯಕಿ ಮಾನ್ವಿತಾ ಕಾಮತ್, ನಾಯಕ ಸುಮುಖ ಇಬ್ಬರೂ ಮರಾಠಿ ಭಾಷೆಯನ್ನು ಬಲ್ಲವರಾಗಿದ್ದು ಚಿತ್ರದ ಎರಡೂ ಭಾಷೆಗಳಲ್ಲಿ ಅವರದ್ದೇ ಧ್ವನಿ ಇರಲಿದೆಯಂತೆ.
ರೊಮ್ಯಾಂಟಿಕ್, ಕಾಮಿಡಿ ಕಥಾಹಂದರ ಹೊಂದಿರುವ “ರಾಜಸ್ಥಾನ್ ಡೈರೀಸ್’ ಚಿತ್ರದಲ್ಲಿ ಇಂದಿನ ಪೀಳಿಗೆಯ ಪ್ರೇಮಕಥೆಯನ್ನು ತೆರೆಮೇಲೆ ಹೇಳಲಾಗುತ್ತಿದೆ. ಎರಡು ಜನರೇಷನ್ ನಡುವಿನ ಸಂಬಂಧಗಳನ್ನು ಚಿತ್ರ ತೆರೆದಿಡಲಿದೆ ಎನ್ನುತ್ತದೆ ಚಿತ್ರತಂಡ.
ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು, ಕೆ.ಎಸ್ ನಿಸ್ಸಾರ್ ಅಹಮದ್, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಹಾಡುಗಳಿಗೆ ಸಾಹಿತ್ಯ ಒದಗಿಸುತ್ತಿದ್ದಾರೆ. ಚಿತ್ರಕ್ಕೆ ರಾಘವೇಂದ್ರ ಹಾಸನ್ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಕಾರ್ಯವಿದೆ.