ಡಿವಿಎಸ್ಗೆ ಮತದಾರರ ತರಾಟೆ ದೃಶ್ಯ ವೈರಲ್
Team Udayavani, Apr 4, 2019, 3:00 AM IST
ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಅವರು ಪ್ರಚಾರಕ್ಕೆ ತೆರಳಿದಾಗ ಮತದಾರರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಸದಾನಂದಗೌಡರು ಬೆಂಬಲಿಗರ ಜತೆ ಬುಧವಾರ ಬ್ಯಾಟರಾಯನಪುರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವಾಗ ಯುವಕನೊಬ್ಬ ಎದುರಿಗೆ ಬಂದು ಈ ವಾರ್ಡ್ನಲ್ಲಿ ಕಸದ ಸಮಸ್ಯೆ ಇದೆ. ನೀರು ಸರಿಯಾಗಿ ಬರುತ್ತಿಲ್ಲ. ಕಸ ವಿಲೇವಾರಿ ಆಗುತ್ತಿಲ್ಲ ಎಂದು ಆರೋಪಿಸಿದ್ದು, ಕೆಲವರು ಈ ದೃಶ್ಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಕೆಲವು ಗಂಟೆಗಳಲ್ಲೇ ಇದು ವೈರಲ್ ಆಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸದಾನಂದಗೌಡರು, ಇದು ಕಾಂಗ್ರೆಸ್ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ. ದೇಶದ ಸಂಸತ್ತಿಗೆ ನಡೆಯುವ ಚುನಾವಣೆಯಾಗಿದ್ದು, ಬಿಬಿಎಂಪಿ ಸಮಸ್ಯೆ ಪಾಲಿಕೆ ಸದಸ್ಯರು, ಶಾಸಕರು ಪರಿಹರಿಸುತ್ತಾರೆ.
ಸಂಸದರ ಕಾರ್ಯಚಟುವಟಿಕೆ ತಿಳಿದು ನಂತರ ಈ ರೀತಿಯ ಕೃತ್ಯಕ್ಕೆ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರನ್ನು ಕಳುಹಿಸಲಿ ಎಂದು ತಿರಗೇಟು ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಸಹ ಮಾಡಿರುವ ಡಿವಿಎಸ್, “ಮತದಾರರ ಸೋಗಿನಲ್ಲಿ ಬಂದು ನನ್ನನ್ನು ಪ್ರಶ್ನಿಸಿದವರು ಬ್ಯಾಟರಾಯನಪುರದ ಕಾಂಗ್ರೆಸ್ ಕಾರ್ಯಕರ್ತ ಹನುಮಂತ. ಈತ ಯಾರ ಜತೆ ಇರುತ್ತಾನೆ ಎಂದು ಗೊತ್ತಿದೆ,’ ಎಂದಿದ್ದಾರೆ.