ಶಸ್ತ್ರಾಸ್ತ್ರ ದಾಖಲೆಯನ್ನೇ ಕಳೆದುಕೊಂಡಿದ್ದ ಇಸ್ರೇಲ್ ಅಧಿಕಾರಿಗಳು!
Team Udayavani, Apr 4, 2019, 6:00 AM IST
ಜೆರುಸಲೇಂ: ಭಾರತದೊಂದಿಗೆ ಒಪ್ಪಂದದ ಬಗ್ಗೆ ಚರ್ಚಿಸಲು ಸಿದ್ಧಪಡಿಸಿದ ಶಸ್ತ್ರಾಸ್ತ್ರದ ಮಹತ್ವದ ಮಾಹಿತಿ ಒಳಗೊಂಡ ದಾಖಲೆಯನ್ನೇ ಇಸ್ರೇಲ್ ಅಧಿಕಾರಿಗಳು ಕಳೆದುಕೊಂಡಿದ್ದ ಘಟನೆ ಕಳೆದ ಜನವರಿಯಲ್ಲಿ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿ, ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸುವುದಕ್ಕಾಗಿ ಇಸ್ರೇಲ್ನ ರಕ್ಷಣಾ ಸಲಹೆಗಾರ ಮೇರ್ ಬೆನ್ ಶಬ್ಬತ್ ಅವರ ನಿಯೋಗ ದಿಲ್ಲಿಗೆ ಆಗಮಿಸಿತ್ತು.
ಸ್ಪೈ ಪ್ಲೇನ್ಗಳು, ಕ್ಷಿಪಣಿಗಳು ಹಾಗೂ ರಾಡಾರ್ ಸಿಸ್ಟಂ ಸೇರಿ ಹಲವು ರಕ್ಷಣಾ ಉಪಕರಣಗಳನ್ನು ಭಾರತಕ್ಕೆ ಮಾರಾಟ ಮಾಡಲು ಇಸ್ರೇಲ್ ಬಯ ಸಿದ್ದು, ಈ ಎಲ್ಲ ಉಪಕರಣಗಳ ವಿವರ ಉಳ್ಳ ಮಾಹಿತಿಯನ್ನು ನಿಯೋಗದ ಅಧಿಕಾರಿಯೊಬ್ಬರು ಮುದ್ರಿಸಿದ್ದರು. ಆದರೆ ಭಾರತಕ್ಕೆ ಆಗಮಿಸುವುದಕ್ಕೂ ಮುನ್ನ ಜೆರುಸಲೇಂನ ಹೊಟೇಲ್ನಲ್ಲಿ ಉಪಾಹಾರ ಸೇವಿಸಿದ್ದ ಅಧಿಕಾರಿಗಳು ಈ ದಾಖಲೆಯನ್ನು ಅಲ್ಲೇ ಬಿಟ್ಟು ಹೊರಟಿದ್ದರು. ಅನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಪರಿಚಾರಕನ ಸ್ನೇಹಿತರ ತಾಯಿ ಇಸ್ರೇಲ್ನ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಸಂಪರ್ಕಿಸಿ ದಾಖಲೆಯನ್ನು ಒಪ್ಪಿಸಲಾಗಿದ್ದು, ಪರಿಚಾರಕನ ಸ್ನೇಹಿತ ಹೊಸದಿಲ್ಲಿಗೆ ವಿಮಾನದಲ್ಲಿ ಬಂದು ನಿಯೋಗಕ್ಕೆ ದಾಖಲೆ ಹಸ್ತಾಂತರಿಸಿದ್ದಾರೆ. ಇದರ ಬಗ್ಗೆ ನಂತರ ನಡೆದ ತನಿಖೆಯಲ್ಲಿ ಯಾವುದೇ ಗೌಪ್ಯ ಮಾಹಿತಿ ಕಳ್ಳತನವಾದ ಬಗ್ಗೆ ಸಾಬೀತಾಗಿಲ್ಲ. ದಾಖಲೆ ಕಳೆದು ಹಾಕಿದ್ದ ಅಧಿಕಾರಿಗೆ ಎಚ್ಚರಿಕೆ ನೀಡಲಾಗಿದೆ.