ದೆಪ್ಪುತ್ತೆ ಗೋಮಾಳದಲ್ಲಿ ನೀರಿನ ತೊಟ್ಟಿ ನಿರ್ಮಾಣ
Team Udayavani, Apr 5, 2019, 6:30 AM IST
ಅಜೆಕಾರು: ಸುಡು ಬಿಸಿಲಿನಿಂದಾಗಿ ವಾತಾವರಣ ಬೆಂಕಿ ಉಂಡೆಯಂತಾಗಿದ್ದು ಮೂಕ ಜೀವಿಗಳಿಗೆ ನೀರೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿಯ ವಾಸ್ತ ವತೆಯನ್ನು ಅರಿತುಕೊಂಡ ಮರ್ಣೆ ಪಂಚಾಯತ್ ಆಡಳಿತವು ವಿಶಾಲವಾದ ನೀರಿನ ತೊಟ್ಟಿ (ಟ್ಯಾಂಕ್) ನಿರ್ಮಾಣ ಮಾಡಿ ಮಾನವೀಯ ಕಾರ್ಯಕ್ಕೆ ಮುಂದಾಗಿದೆ.
ಪಂಚಾಯತ್ ವ್ಯಾಪ್ತಿಯ ದೆಪ್ಪುತ್ತೆ ಪ್ರದೇಶದಲ್ಲಿ ಸುಮಾರು 15 ಎಕ್ರೆಗಳಷ್ಟು ಗೋಮಾಳ ಜಾಗವಿದ್ದು ಇಲ್ಲಿಗೆ ಪ್ರತೀನಿತ್ಯ ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಆಹಾರವನ್ನು ಅರಸುತ್ತಾ ಬರುತ್ತಿದ್ದು ಇವುಗಳಿಗೆ ಬೇಸಗೆಯ ಸಮಯದಲ್ಲಿ ದಾಹ ತೀರಿಸಲು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು.
1,000 ಲೀ. ನೀರು
ಇದನ್ನು ಗಮನಿಸಿದ ಪಂಚಾಯತ್ ಆಡಳಿತವು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದೊಂದಿಗೆ ಸುಮಾರು 8 ಮೀ. ಉದ್ದ ಹಾಗೂ 5ಮೀ. ಅಗಲದ ನೀರಿನ ತೊಟ್ಟಿಯನ್ನು ನಿರ್ಮಿಸಿದ್ದು ಇದಕ್ಕೆ ಪ್ರತೀ ದಿನ ಸುಮಾರು 1,000 ಲೀ. ನೀರನ್ನು ತುಂಬಿಸಲಾಗುತ್ತಿದೆ.
ಪರಿಸರದ ದನಗಳು, ಇತರ ಸಾಕುಪ್ರಾಣಿಗಳು ಹಾಗೂ ಸುತ್ತಲಿನ ಕಾಡುಪ್ರಾಣಿಗಳು ಈ ತೊಟ್ಟಿಯಿಂದ ಈಗಾಗಲೇ ನೀರನ್ನು ಕುಡಿಯಲು ಪ್ರಾರಂಭಿಸಿವೆ. ಪಂಚಾಯತ್ನ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ನೀರಿನ ವ್ಯವಸ್ಥೆ
ಪ್ರಾಣಿ, ಪಕ್ಷಿಗಳಿಗೆ ಬೇಸಗೆಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಪಂಚಾಯತ್ ವ್ಯಾಪ್ತಿಯ ಅದೊÅಟ್ಟು ಬಾಕ್ಯಾರ್ ಬಳಿ 14ನೇಹಣಕಾಸು ಯೋಜನೆಯಡಿ ನೀರಿನ ತೊಟ್ಟಿ ರಚನೆ ಮಾಡಲಾಗಿದ್ದು ಪ್ರತೀದಿನ ನೀರು ಸರಬರಾಜಿನ ವ್ಯವಸ್ಥೆ ಕಲ್ಪಿಸಲಾಗಿದೆ.
-ತಿಲಕ್ರಾಜ್, ಪಿಡಿಒ ಮರ್ಣೆ ಗ್ರಾ.ಪಂ.