ಸರ್ವ ಧರ್ಮ ಸೌಹಾರ್ದದ ಕಾಂಗ್ರೆಸ್ ಗೆಲ್ಲಿಸಿ: ರೈ
Team Udayavani, Apr 10, 2019, 6:00 AM IST
ಪುಂಜಾಲಕಟ್ಟೆ: ಧಾರ್ಮಿಕ ಭಾವನೆಗಳ ಮೂಲಕ ಜನತೆಯನ್ನು ವಿಭಜಿಸಿ ಮತ ಕೇಳುವ ಬಿಜೆಪಿಯನ್ನು ದೂರವಿರಿಸಿ ಸರ್ವ ಧರ್ಮ ಸೌಹಾರ್ದದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.
ಬಂಟ್ವಾಳ ತಾಲೂಕು ರಾಯಿ ಗ್ರಾ.ಪಂ. ವ್ಯಾಪ್ತಿಯ ಅಣ್ಣಳಿಕೆಯಲ್ಲಿ ಎ. 8ರಂದು ರಾತ್ರಿ ನಡೆದ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಚುನಾವಣ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಮೋಸದ ಮಾತುಗಳಿಂದ ಜನತೆ ಯನ್ನು ಮರುಳುಗೊಳಿಸಿದ್ದಾರೆ. ಜನಧನ ಮೂಲಕ ಪ್ರತಿಯೊಬ್ಬರ ಖಾತೆಗೆ ಆರ್ಥಿಕ ಸಹಾಯ ನೀಡುವ ಮಾತು ಸುಳ್ಳಾಗಿದೆ. 30 ರೂ.ಗಳಿಗೆ ಪೆಟ್ರೋಲ್, ಡೀಸೆಲ್ ನೀಡುತ್ತೇನೆಂದ ಮೋದಿ ಜನತೆಯನ್ನು ವಂಚಿಸಿದ್ದಾರೆ. ಕಾಳಧನ ವಾಪಸು ತರುತ್ತೇವೆಂದು ಹೇಳಿದವರು ಬಂಡವಾಳಶಾಯಿಗಳಿಗೆ ಮಣೆ ಹಾಕಿದ್ದಾರೆ. ಕಳೆದ 28 ವರ್ಷಗಳಿಂದ ಬಿಜೆಪಿ ಸದಸ್ಯರ ಸಾಧನೆ ಶೂನ್ಯವಾಗಿದೆ. ಮತ್ತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಅಭಿವೃದ್ಧಿಗೆ ಅವಕಾಶ ನೀಡಿ ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಕೆ. ಮಾಯಿಲಪ್ಪ ಸಾಲ್ಯಾನ್, ಬಿ. ಪದ್ಮಶೇಖರ ಜೈನ್, ಪದ್ಮರಾಜ ಬಲ್ಲಾಳ್ ಮಾವಂತೂರು, ಜನಾರ್ದನ ಚಂಡ್ತಿಮಾರ್, ರಾಮಚಂದ್ರ ಶೆಟ್ಟಿಗಾರ್, ರಾಯಿ ವಲಯಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ರಾಯಿ, ಅರಳ ವಲಯಾಧ್ಯಕ್ಷ ಅಶ್ರಫ್ ಕುಟ್ಟಿಕಳ, ಗ್ರಾ.ಪಂ. ಸದಸ್ಯರಾದ ಜಗದೀಶ್ ಕೊçಲ, ಸುನಂದಾ ಮತ್ತಿತರರು ಉಪಸ್ಥಿತರಿದ್ದರು.