ಪ್ರಾಮಾಣಿಕ ಚೌಕಿದಾರ್ ಬೇಕೋ, ಭ್ರಷ್ಟ ನಾಮ್ ದಾರ್ ಬೇಕೋ; ಮೋದಿ
Team Udayavani, Apr 12, 2019, 2:40 PM IST
ಮಹಾರಾಷ್ಟ್ರ:ಕಾಂಗ್ರೆಸ್ ಪಕ್ಷಕ್ಕೆ ದೇಶದ ಹಿತಾಸಕ್ತಿಯನ್ನು ಕಾಪಾಡಬೇಕೆಂಬ ಯಾವುದೇ ಕಾಳಜಿ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ತೊಲಗಿಸುವ ಮೂಲಕ ಬಡತನ ತೊಲಗಿಸಿ ಎಂಬ ಹೊಸ ಸ್ಲೋಗನ್ ಅನ್ನು ಮೋದಿ ಘೋಷಿಸಿದರು.
ಕಳೆದ ಐದು ವರ್ಷಗಳಲ್ಲಿ ಇಡೀ ವಿಶ್ವವೇ ಬಲಿಷ್ಠ ಮತ್ತು ದೃಢ ನಿರ್ಧಾರದ ಸರ್ಕಾರವನ್ನು ಕಂಡಿದೆ. ಇದಕ್ಕೂ ಮುನ್ನ ದೇಶದಲ್ಲಿ ಹತ್ತು ವರ್ಷಗಳ ಕಾಲ ರಿಮೋಟ್ ಕಂಟ್ರೋಲ್ ಸರ್ಕಾರ ಅಧಿಕಾರದಲ್ಲಿತ್ತು. ಅಷ್ಟೇ ಅಲ್ಲ ಹಗರಣಗಳ ಸುದ್ದಿಯೇ ಹೆಚ್ಚಾಗಿತ್ತು ಎಂದು ಮೋದಿ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ದೂರಿದರು.
ಹಾಲಿ ಸರ್ಕಾರ ಬಲಿಷ್ಠವಾಗಿದೆ ಎಂಬುದನ್ನು ಇಡೀ ಜಗತ್ತೇ ಮನಗಂಡಿದೆ. ಆ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ನೀವು ಭವಿಷ್ಯದ ಉತ್ತಮ ಸರ್ಕಾರದ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ನಿಮಗೆ ಪ್ರಾಮಾಣಿಕ ಚೌಕಿದಾರ್ ಬೇಕೋ ಅಥವಾ ಭ್ರಷ್ಟ ನಾಮ್ ದಾರ್(ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಹೆಸರನ್ನು ಉಲ್ಲೇಖಿಸದೆ) ಬೇಕೋ ಎಂಬುದನ್ನು ನೀವೇ(ಮತದಾರರು) ತೀರ್ಮಾನ ಮಾಡಬೇಕು ಎಂದು ಹೇಳಿದರು.
ಒಂದು ವೇಳೆ ನೀವು ಹಿಂದೂಸ್ತಾನ್ ಹೀರೋಗೆ ಮತ ಹಾಕುತ್ತೀರೋ ಅಥವಾ ಪಾಕಿಸ್ತಾನ ಪರವಾಗಿರುವವರಿಗೆ ಮತ ಚಲಾಯಿಸುತ್ತೀರೋ ಎಂಬುದನ್ನು ನಿರ್ಧರಿಸಬೇಕು ಎಂದು ಪ್ರಧಾನಿ ಮೋದಿ ತಿಳಿಸಿದರು.