ಮರಳಿ ಕೃಷ್ಣಮಠಕ್ಕೆ “ಸುಭದ್ರೆ’
Team Udayavani, Apr 13, 2019, 6:05 AM IST
ಉಡುಪಿ: ಶ್ರೀಕೃಷ್ಣಮಠದಲ್ಲಿ ಹಲವು ದಶಕಗಳಿಂದ ಇದ್ದು ಉತ್ಸವಾದಿಗಳಲ್ಲಿ ಭಾಗಿಯಾಗಿದ್ದ ಆನೆ ಸುಭದ್ರೆ ಬುಧವಾರ ಮರಳಿ ಕೃಷ್ಣಮಠಕ್ಕೆ ಬುಧವಾರ ಆಗಮಿಸಿದೆ.
ಕಾಣಿಯೂರು ಶ್ರೀಗಳ ಪರ್ಯಾಯ ಸಂದರ್ಭ ಸುಭದ್ರೆಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿಗೆ ಕಳುಹಿಸಲಾಗಿತ್ತು. ಇದೀಗ ಸುಭದ್ರೆಯ ಆರೋಗ್ಯದಲ್ಲಿ ಪೂರ್ಣ ಚೇತರಿಕೆಯಾಗಿದೆ.
ಮುಂದಿನ ತಿಂಗಳು ಶ್ರೀಕೃಷ್ಣ ಮಠದಲ್ಲಿ ಪಲಿಮಾರು ಮಠದ ಕಿರಿಯ ಶ್ರೀಪಾದರ ಪಟ್ಟಾಭಿಷೇಕ ಹಾಗೂ ನಿರಂತರ ಉತ್ಸವಾದಿಗಳು ನೆರವೇರುವುದರಿಂದ ಆನೆಯ ಅವಶ್ಯಕತೆ ಮನಗಂಡು ಪುನಃ ಮಠಕ್ಕೆ ಆನೆಯನ್ನು ಕರೆತರಲಾಗಿದೆ.
ಪ್ರಸ್ತುತ ಸುಭದ್ರೆಯ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಕೆಲವು ಕಾಲ ಸಕ್ರೆಬೈಲಿನಲ್ಲಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದೆ. ಇಲ್ಲಿನ ವಾತಾವರಣಕ್ಕೂ ಹೊಂದಿಕೊಳ್ಳುವ ವಿಶ್ವಾಸವಿದೆ. ಆದರೆ ಆನೆಗೆ ಆರೋಗ್ಯ ಸಮಸ್ಯೆ ಎದುರಾದರೆ ಚಿಕಿತ್ಸೆ ನೀಡಲು ಇಲ್ಲಿ ಸೂಕ್ತ ಪಶು ವೈದ್ಯರಿಲ್ಲ. ಹಾಗಾಗಿ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತದೆ. ಅವಶ್ಯ ಬಿದ್ದರೆ ಶಿವಮೊಗ್ಗದಿಂದಲೇ ಪಶುವೈದ್ಯರನ್ನು ಕರೆಸಿಕೊಳ್ಳಬೇಕಾಗುತ್ತದೆ ಎಂದು ಮಠದ ಮ್ಯಾನೇಜರ್ ಪ್ರಹ್ಲಾದ ಆಚಾರ್ಯ ಪ್ರತಿಕ್ರಿಯಿಸಿದ್ದಾರೆ.