ಮತದಾನಕ್ಕೆ ಸಿದ್ಧತೆ: ಮತಗಟ್ಟೆಗೆ ತೆರಳಿದ ಸಿಬ್ಬಂದಿ
Team Udayavani, Apr 18, 2019, 3:00 AM IST
ಆನೇಕಲ್: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಆನೇಕಲ್ ತಾಲೂಕಿನಲ್ಲಿ ಚುನಾವಣೆಗೆ ಸಕಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಮಸ್ಟರಿಂಗ್ ಸೆಂಟರ್ ನಿರ್ಮಾಣ ಮಾಡಲಾಗಿದ್ದು, ತಾಲೂಕಿನ 368 ಮತಗಟ್ಟೆಗಳಿಗೆ ಇಲ್ಲಿಂದಲೇ ವಿದ್ಯುನ್ಮಾನ ಮತಯಂತ್ರಗಳನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಮದನ್ಮೋಹನ್ ತಿಳಿಸಿದರು.
2 ಸಾವಿರ ಸಿಬ್ಬಂದಿ ನೇಮಕ: ಚುನಾವಣೆಗಾಗಿ ತಾಲೂಕಿನಲ್ಲಿ 2 ಸಾವಿರ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
368 ಮತಗಟ್ಟೆ ಸ್ಥಾಪನೆ: ಚುನಾವಣೆಗಾಗಿ ಆನೇಕಲ್ ಕ್ಷೇತ್ರದಲ್ಲಿ ಒಟ್ಟು 368 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಇವುಗಳಲ್ಲಿ 69 ಸೂಕ್ಷ್ಮ ಹಾಗೂ 4 ಅತೀ ಸೂಕ್ಷ್ಮ ಮತಗಟ್ಟೆಗಳು ಎಂದು ಈಗಾಗಲೇ ಗುರುತಿಸಲಾಗಿದೆ.
ಅಲ್ಲದೇ, 2 ಸಖೀ ಮತಗಟೆಗಳನ್ನು ಸಹ ಈ ಭಾಗದಲ್ಲಿ ತೆರೆಯಲಾಗಿದೆ. ಬಂದೋಬಸ್ತ್ಗಾಗಿ 850 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅಕ್ರಮ ತಡೆಗೆ ಹದ್ದಿನ ಕಣ್ಣು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮಗಳು ನಡೆಯದಂತೆ ಎಲ್ಲಾ ಕಡೆಗಳಲ್ಲಿ ಹದ್ದಿನ ಕಣ್ಣು ಇಡಲಾಗಿದೆ. ಇದಲ್ಲದೇ, ತಾಲೂಕಿಗೆ ಬರುವ 6 ಮುಖ್ಯ ರಸ್ತೆಗಳಲ್ಲಿ ಚೆಕ್ಪೊಸ್ಟ್ಗಳನ್ನು ಸ್ಥಾಪನೆ ಮಾಡಲಾಗಿದೆ. ಆ ಮೂಲಕ ಚುನಾವಣೆ ನ್ಯಾಯಸಮ್ಮತವಾಗಿ ನಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿರುವುದಾಗಿ ಸಹಾಯಕ ಚುನಾವಣಾ ಅಧಿಕಾರಿಗಳು ತಿಳಿಸಿದರು.
ಒಟ್ಟು 3,63,881 ಮತದಾರರು: ಆನೇಕಲ್ ತಾಲೂಕಿನಲ್ಲಿ ಮಹಿಳೆಯರು 1,71,336, ಪುರುಷರು 1,92,459, ಇತರೆ 86 ಜನ ಸೇರದಂತೆ ಒಟ್ಟು 3,63,881 ಮತದಾರರು ಇದ್ದಾರೆ. ತಾಲೂಕಿನಲ್ಲಿ ಭದ್ರತಾ ದೃಷ್ಟಿಯಿಂದ 850 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ: 62 ಬಿಎಂಟಿಸಿ ಬಸ್ಗಳ ಮೂಲಕ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕಳುಹಿಸುವ ಕೆಲಸವನ್ನು ಬುಧವಾರ ಸಂಜೆ ಮಾಡಲಾಯಿತು.