ಹೀರೋ, ಜೋಕರ್ ಯಾರೆಂಬುದನ್ನು ಮತದಾರರು ತೀರ್ಮಾನಿಸುತ್ತಾರೆ: ಬಿಜೆಪಿ ಶಾಸಕ
Team Udayavani, Apr 19, 2019, 11:43 AM IST
ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ನಾಯಕ ಹೀರೋ ಯಾವ ನಾಯಕರು ಜೋಕರ್ ಎನ್ನುವುದನ್ನು ಮತದಾರರು ತೀರ್ಮಾನಿಸಲಿದ್ದಾರೆ ಎದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಾರಿಯ ಚುನಾವಣಾ ಫಲಿತಾಂಶಗಳು ಹೊರಬಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಹೀರೋ ಆಗಿ ಹೊರಹೊಮ್ಮಲಿದ್ದಾರೆ; ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಜೋಕರ್ ಗಳೆಂದು ಸಾಬೀತಾಗುತ್ತದೆ ಎಂದವರು ಮಾಧ್ಯಮಕ್ಕೆ ಹೇಳಿದರು.
ನೀವ್ಯಾಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಮತ್ತು ಸಿಎಂ ಕುಮಾರಸ್ವಾಮಿ ಅವರನ್ನು ತಮಾಷೆ ಮಾಡುತ್ತೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಬೊಮ್ಮಾಯಿ ಅವರು, “ಅವರು (ರಾಹುಲ್ ಮತ್ತು ಕುಮಾರಸ್ವಾಮಿ) ತಮ್ಮ ನಡೆ-ನುಡಿಯಿಂದ ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುತ್ತಿದ್ದಾರೆ. ಅವರ ಹಾವಭಾವಗಳಿಂದಲೂ ಇದು ಗೊತ್ತಾಗುತ್ತಿದೆ’ ಎಂದು ಹೇಳಿದರು.
ಬ್ರಿಟಿಷರು ಅನುಸರಿಸುತ್ತಿದ್ದ ಒಡೆದು ಆಳುವ ನೀತಿಯಯಂತೆ ಕಾಂಗ್ರೆಸ್ ಪಕ್ಷ ಲಿಂಗಾಯತರ ಧಾರ್ಮಿಕ ವಿಷಯವನ್ನು ಬಳಸಿಕೊಳ್ಳುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದರು.