ಬರವಣಿಗೆಗಾಗಿ ಬದುಕಿದ ಡಿವಿಜಿ
Team Udayavani, Apr 20, 2019, 3:00 AM IST
ಬೆಂಗಳೂರು: ಬರವಣಿಗೆಗಾಗಿಯೇ ಬದುಕಿದ ಜೀವಿ ಡಿವಿಜಿ ಎಂದು ಲೇಖಕಿ ರಾಣಿ ಗೋವಿಂದರಾಜು ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ನ ಸಾಂಸ್ಕೃತಿಕ ಸಮಿತಿ, ಶುಕ್ರವಾರ ಕ್ಲಬ್ನ ವಾಚನಾಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಡಿವಿಜಿ ಅವರ ಬದುಕು-ಬರಹ’ ಕುರಿತು ಉಪನ್ಯಾಸ ನೀಡಿದರು. ಉತ್ತಮ ಕೃತಿಗಳ ರಚನೆ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಡಿವಿಜಿ, ಕನ್ನಡ ಸಾಹಿತ್ಯ ಸೇವೆಗಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದರು ಎಂದು ಹೇಳಿದರು.
ಪಾಶ್ಚಿಮಾತ್ಯ ಸಾಹಿತ್ಯದ ಅನುಕರಣೆ ಬಗ್ಗೆ ಸದಾ ಎಚ್ಚರಿಸುತ್ತಿದ್ದ ಅವರು, ಇರುವ ಭಾಗ್ಯವ ನೆನೆದು ಬಾರೆನೆಂಬುವುದನ್ನು ಬಿಡು ಹರುಷಕ್ಕಿದೆ ದಾರಿ ಎಂದು ಹೇಳುತ್ತಿದ್ದರು. ಸಾಹಿತ್ಯದ ಕುರಿತ ಹಲವು ವಿಚಾರಗಳಲ್ಲಿ ಡಿವಿಜಿ ಆಗಾಗ ನೆನಪಾಗುತ್ತಾರೆ ಎಂದರು.
ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದ್ದು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳು ಪ್ರಭಾವ ಬೀರಿದರೂ ಸಹ ತನ್ನಲ್ಲಿರುವ ಸತ್ವದಿಂದಾಗಿ ಅಸ್ಥಿತ್ವವನ್ನು ಉಳಿಸಿಕೊಂಡಿದೆ. ಹೀಗಾಗಿ ಕನ್ನಡ ಭಾಷೆಗೆ ಅಳಿವಿಲ್ಲ. ಈ ಭಾಷೆಯನ್ನು ಯಾರೂ ಕೂಡ ಬೆಳಸಬೇಕಾದ ಅಗತ್ಯವಿಲ್ಲ. ತನ್ನಲ್ಲಿರುವ ಸತ್ವದಿಂದಲೇ ಕನ್ನಡ ಭಾಷೆ ಬೆಳೆಯುತ್ತದೆ ಎಂದು ಹೇಳಿದರು.