ಬದ್ಧತೆಯಿಂದ ಕಾರ್ಯ ನಿರ್ವಹಿಸಲು ಡಿಸಿ ಸೂಚನೆ
Team Udayavani, Apr 22, 2019, 4:46 PM IST
ದೇವರಹಿಪ್ಪರಗಿ: ವಿಕಲಚೇತನರ ಮತದಾನಕ್ಕೆ ಅನುಕೂಲವಾಗಲು ತ್ರಿಚಕ್ರ ಸೈಕಲ್ ಸೌಲಭ್ಯವನ್ನು ಜಿಲ್ಲಾಧಿಕಾರಿ ಕನಗವಲ್ಲಿ ಉದ್ಘಾಟಿಸಿದರು.
ದೇವರಹಿಪ್ಪರಗಿ: ಚುನಾವಣೆ ನ್ಯಾಯ ಸಮ್ಮತವಾಗಿ ನಡೆಸಲು ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ಯಾವುದೇ ಅಹಿತಕರ ನಡೆಯದಂತೆ ಮುನ್ನೆಚರಿಕೆ ವಹಿಸಬೇಕು. ಯಾವುದೇ ಲೋಪಗಳು ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಚುನಾವಣಾ ಆಯೋಗಕ್ಕೆ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾಕಾರಿ ಎಂ.ಕನಗವಲ್ಲಿ ಹೇಳಿದರು.
ಪಟ್ಟಣದ ಬಿಎಲ್ಡಿಇ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ತರಬೇತಿಯ ಎರಡನೇ ಹಂತದ ಸಭೆಯಲ್ಲಿ ಮಾತನಾಡಿದ ಅವರು, ಉತ್ತಮ ರೀತಿಯಲ್ಲಿ ತರಬೇತಿ ಪಡೆದುಕೊಂಡು ಚುನಾವಣೆಗೆ ಸಜ್ಜಾಗಬೇಕು. ಚುನಾವಣೆ ದಿನ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಚುನಾವಣಾ ಕಾರ್ಯ ನಿರ್ವಹಿಸಲು ಸೂಚಿಸಿದರು.
ಇದಕ್ಕೂ ಮುಂಚೆ ಮತಗಟ್ಟೆ ಅಧಿಕಾರಿಗಳಿಗೆ ನಡೆಯುತ್ತಿದ್ದ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಈ ವೇಳೆ ಮತದಾನದ ದಿನ ವಿಕಲಚೇತನರು, ವೃದ್ಧರು, ತುಂಬು ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತದಾನ ಕೇಂದ್ರಕ್ಕೆ ತೆರಳಲು ಸಹಾಯಕ್ಕಾಗಿ ತ್ರಿಚಕ್ರ ವ್ಯವಸ್ಥೆ ಮಾಡಲಾಗಿದ್ದು ಅವುಗಳನ್ನು ಉದ್ಘಾಟಿಸಿ ಪಪಂ ಕಾರ್ಯಕ್ಕೆ ಪ್ರಶಂಸಿದರು.
ಸಹಾಯಕ ಚುನಾವಣಾಧಿಕಾರಿ ಜಿ.ಎಚ್. ನಾಗಹನುಮಂತಯ್ಯ, ತಹಶೀಲ್ದಾರ್ ರಮೇಶ ಅಳವಂಡಿಕರ, ಪಪಂ ಮುಖ್ಯಾಧಿಕಾರಿ ಸಂಜಯ ಮಾಂಗ, ಉಪ ತಹಶೀಲ್ದಾರ್ ಇಂದಿರಾ ಬಳಗಾನೂರ ಸೇರಿದಂತೆ ವಿವಿಧ ಹಂತ ಅಧಿಕಾರಿಗಳು, ಚುನಾವಣೆ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳು ಇದ್ದರು.