ಇಲಾಖಾ ವಿಚಾರಣೆ ತ್ವರಿತಗೊಳಿಸಲು ಸಿಎಸ್ ಸೂಚನೆ
Team Udayavani, Apr 24, 2019, 3:22 AM IST
ಬೆಂಗಳೂರು: ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಸರ್ಕಾರಿ ನೌಕರರ ಇಲಾಖಾ ವಿಚಾರಣೆ ವಿಳಂಬವಾಗುತ್ತಿರುವುದನ್ನು ತಪ್ಪಿಸಲು ಹಾಗೂ ಲೋಪದೋಷಗಳನ್ನು ಸರಿಪಡಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ ನಿಮಯ 11 ರಡಿ ಬರುವ ಪ್ರಕರಣಗಳಲ್ಲಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯೊಂದಿಗೆ ಅನಗತ್ಯ ಪತ್ರ ವ್ಯವಹಾರ ಮಾಡದೇ, ಇಲಾಖೆ ವ್ಯಾಪ್ತಿಯಲ್ಲಿಯೇ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಕಠಿಣ ದಂಡನೆ ವಿಧಿಸಬೇಕಾದ ಪ್ರಕರಣಗಳಲ್ಲಿ ಮಾತ್ರ ಸಂಬಂಧಿಸಿದ ಶಿಸ್ತು ಪ್ರಾಧಿಕಾರಕ್ಕೆ ಇಲಾಖಾ ವಿಚಾರಣೆಯ ದಾಖಲೆಗಳನ್ನು ಕಳುಹಿಸುವಂತೆ ಸೂಚಿಸಿದ್ದಾರೆ.
ಅನಧಿಕೃತ ಗೈರು ಹಾಜರಾದ ನೌಕರರ ಪ್ರಕರಣಗಳಲ್ಲಿ ಕಾಲ ವಿಳಂಬ ಮಾಡದೇ ಕ್ರಮ ಕೈಗೊಳ್ಳುವುದು. ಲೋಕಾಯುಕ್ತ ಹಾಗೂ ಎಸಿಬಿ ತನಿಖಾ ಸಂಸ್ಥೆಗಳಿಗೆ ಪ್ರಕರಣ ವರ್ಗಾವಣೆಯಾಗಿದ್ದರೆ, ತನಿಖೆಗೆ ಪೂರಕವಾಗಿ ಸೂಕ್ತ ಮಾಹಿತಿ ಒದಗಿಸುವುದು. ನೌಕರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿ, ಶಿಸ್ತು ಪ್ರಾಧಿಕಾರ ವಿಚಾರಣೆ ನಡೆಸಲು ನಿರ್ಧರಿಸಿದರೆ, ಒಂದು ತಿಂಗಳಲ್ಲಿ ವಿಚಾರಣಾಧಿಕಾರಿ ಮತ್ತು ದಂಡಾಧಿಕಾರಿಯನ್ನು ಏಕಕಾಲಕ್ಕೆ ನೇಮಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.