ಯೋಧನ ಕುಟುಂಬದಲ್ಲಿ ಅತ್ತೆ-ಸೊಸೆ ಜಗಳ ಬೀದಿಗೆ
Team Udayavani, Apr 24, 2019, 1:11 PM IST
ಭಾರತೀನಗರ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಕುಟುಂಬದಲ್ಲಿ ಹೊಗೆಯಾಡುತ್ತಿದ್ದ ಅತ್ತೆ-ಸೊಸೆಯರ ಜಗಳ ಇದೀಗ ಹಾದಿ-ಬೀದಿ ರಂಪಾಟವಾಗಿ ಗುಡಿಗೆರೆ ಗ್ರಾಮಸ್ಥರು ತಲೆತಗ್ಗಿಸುವಂತಾಯಿತು.
ಇಡೀ ದೇಶವೇ ಯೋಧರ ಸಾವಿಗೆ ಮಮ್ಮಲ ಮರುಗಿದ್ದು, ರಾಜ್ಯ ಸರ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಗುರುವಿನ ಅಂತ್ಯಸಂಸ್ಕಾರ ನಡೆಸಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಗುಡಿಗೆರೆಗೆ ಆಗಮಿಸಿ ಗುರು ಕುಟುಂಬಕ್ಕೆ ಸಾಂತ್ವನ ಹೇಳಿ, ಪರಿಹಾರ ದೊರಕಿಸಿದ್ದರು.
ಬೀದಿಗೆ ಬಂದ ರಂಪಾಟ: ಇದಲ್ಲದೆ ಅನೇಕ ಕಂಪನಿ, ಸಂಘ-ಸಂಸ್ಥೆಗಳಿಂದ ನೆರವಿನ ಮಹಾಪೂರವೇ ಹರಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಹಲವಾರು ಬಾರಿ ಜಗಳ ನಡೆದಿದ್ದು, ಅತ್ತೆ ಚಿಕ್ಕೋಳಮ್ಮ ಹಾಗೂ ಗುರು ಪತ್ನಿ ಕಲಾವತಿ ನಡುವೆ ಇದ್ದ ಮನಸ್ತಾಪ ಮಂಗಳವಾರ ಬೀದಿಗೆ ಬಂದು ಇಬ್ಬರೂ ಪರಸ್ಪರ ಬೈದಾಡಿ ನಿಂದಿಸಿದ ಪ್ರಸಂಗ ನಡೆಯಿತು.
ಪ್ರಯೋಜನವಾಗದ ಮಾತುಕತೆ: ಆದರೆ, ಗ್ರಾಮಸ್ಥರು ಇವರ ಜಗಳವನ್ನು ಬಿಡಿಸಲು ಮುಂದಾಗಲಿಲ್ಲ. ಈಗಾಗಲೇ ಹಲವಾರು ಬಾರಿ ಗ್ರಾಮದ ಮುಖಂಡರು ಇಬ್ಬರ ನಡುವಿನ ಮನಸ್ತಾಪ ಹೋಗಲಾಡಿಸಲು ಮಾತುಕತೆ ನಡೆಸಿದ್ದರು. ಆದರೆ, ಪರಿಹಾರ ರೂಪದಲ್ಲಿ ಬಂದ ಚೆಕ್ಗಳು ಕಲಾವತಿಯವರ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯವಾದರೆ, ನಗದು ರೂಪದಲ್ಲಿ ಬಂದ ಪರಿಹಾರದ ಹಣ ಗುರು ಅವರ ತಾಯಿ ಚಿಕ್ಕೋಳಮ್ಮ ಅವರಿಗೆ ಬಂದಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಹೊಗೆಯಾಡುತ್ತಿದ್ದ ದ್ವೇಷ ಇಂದು ಭುಗಿಲೆದ್ದು ಮನೆಯೊಳಗೆ ನಡೆದಿದ್ದ ಇದುವರೆಗಿನ ಜಗಳ ಇಂದು ಬೀದಿಯಲ್ಲಿ ಅನಾವರಣಗೊಂಡಿತ್ತು. ಇದಕ್ಕೆಲ್ಲ ಕಾರಣ ಹಣ ಎಂಬುದು ವಿಷಾದದ ಸಂಗತಿ. ಗಲಾಟೆ ಬಿಡಿಸಲು ಗುರು ಸಹೋದರ ಮಧು ಹೆಣಗಾಡಿದರು. ಒಂದು ಹಂತದಲ್ಲಿ ಕಲಾವತಿಯನ್ನು ಮಧುವಿಗೆ ಮದುವೆ ಮಾಡಿಕೊಳ್ಳುವ ಇರಾದೆ ವ್ಯಕ್ತವಾಗಿತ್ತು. ಆದರೆ ಇಂದು ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಜಗಳ ನಡೆಯುತ್ತಿದ್ದ ಸಂದರ್ಭದಲ್ಲೇ ಸಾಸಲಪುರದಿಂದ ಕಲಾವತಿ ಪೋಷಕರು ಕಾರಿನಲ್ಲಿ ಬಂದು ಮಗಳನ್ನು ಕರೆದೊಯ್ದರು.
ಆದರೆ, ಅತ್ತೆ ಚಿಕ್ಕೋಳಮ್ಮ ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ಮನೆಯೆಂದ ಮೇಲೆ ಇವೆಲ್ಲ ಸಹಜ. ಸಂಸಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಇದೇ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಕುರಿತು ಸಚಿವ ಡಿ.ಸಿ.ತಮ್ಮಣ್ಣ ಬೆಂಬಲಿಗರು, ಇದು ಹುತಾತ್ಮ ಯೋಧನ ಕುಟುಂಬಕ್ಕೆ ಗೌರವ ತರುವಂಥ ಬೆಳವಣಿಗೆಯಲ್ಲ. ನಿಮ್ಮ ಕುಟುಂಬದ ವ್ಯತ್ಯಾಸಗಳನ್ನು ನೀವೇ ಕುಳಿತು ಬಗೆಹರಿಸಿಕೊಳ್ಳಬೇಕು. ಹಾದಿ-ಬೀದಿ ರಂಪಾಟ ಮಾಡಿಕೊಂಡರೆ ವೀರಯೋಧನಿಗೆ ಅವಮಾನಿಸಿದಂತೆ ಎಂದು ಬುದ್ದಿಮಾತು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ