ನಷ್ಟದ ಕೊರಳಿಗೆ ಮತ್ತೂಂದು ಉರುಳು
Team Udayavani, Apr 27, 2019, 11:12 AM IST
ಹುಬ್ಬಳ್ಳಿ: ಹು-ಧಾ ತ್ವರಿತ ಬಸ್ ಸಾರಿಗೆ ವ್ಯವಸ್ಥೆ (ಬಿಆರ್ಟಿಎಸ್) ಆರಂಭಿಕ ನಿರ್ವಹಣೆಗೆ ಸರಕಾರ ಘೋಷಿಸಿದ್ದ ಅನುದಾನ ಭರವಸೆಯಾಗಿಯೇ ಉಳಿದಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪಾಲಿಗೆ ಬಿಆರ್ಟಿಎಸ್ ಬಿಳಿ ಆನೆಯಾಗಿದೆ.
ಬಿಆರ್ಟಿಎಸ್ ಸೇವೆಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು. ಆರಂಭಿಕ ಹಂತದಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಬಸ್ ದರದಲ್ಲಿ ಐಷಾರಾಮಿ ಬಸ್ ಸೇವೆ ನೀಡಬೇಕು ಎನ್ನುವುದು ಸರಕಾರದ ಚಿಂತನೆಯಾಗಿತ್ತು. ಇದರಿಂದ ಬಿಆರ್ಟಿಎಸ್ ಸಂಸ್ಥೆಗೆ ಆಗುವ ನಷ್ಟವನ್ನು ಹಾಗೂ ಯೋಜನೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಆರು ತಿಂಗಳ ಅವಧಿಗೆ ಪ್ರತಿ ತಿಂಗಳು 5 ಕೋಟಿ ರೂ. ಅನುದಾನ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಯಿತು. ಆದರೆ ಈ ತೀರ್ಮಾನ ಕೈಗೊಂಡು ಈಗಾಗಲೇ ಐದು ತಿಂಗಳು ಗತಿಸಿದರೂ ಒಂದು ತಿಂಗಳ ಕಂತು ಕೂಡ ವಾಯವ್ಯ ಸಾರಿಗೆ ಸಂಸ್ಥೆಗೆ ಬಂದಿಲ್ಲ.
ಈ ಹಣ ಪಡೆಯಲು ಸಾರಿಗೆ ಸಂಸ್ಥೆ ಅಧಿಕಾರಿಗಳು ಹಣಕಾಸು ಇಲಾಖೆ ಅಧಿಕಾರಿಗಳ ಟೇಬಲ್ಗೆ ಎಡತಾಕುತ್ತಿರುವುದನ್ನು ಬಿಟ್ಟರೆ ಯಾವ ಫಲವೂ ದೊರೆಯುತ್ತಿಲ್ಲ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ವಾಯವ್ಯ ಸಾರಿಗೆ ಸಂಸ್ಥೆ ಕೊರಳಿಗೆ ಮತ್ತೂಂದು ನಷ್ಟದ ಸಂಸ್ಥೆಯನ್ನು ನೇತಾಕಿರುವುದು ಮತ್ತಷ್ಟು ಸಮಸ್ಯೆಯಾಗಿ ಪರಿಣಮಿಸಿದೆ. ಸರಕಾರದಿಂದ ಬರಬೇಕಾಗಿದ್ದ ಅನುದಾನ ಬಾಕಿ ಉಳಿದಿರುವುದು ಸಂಕಷ್ಟಕ್ಕೆ ಕಾರಣವಾಗಿದೆ.
ನಿರ್ಲಕ್ಷ್ಯ ಕಾರಣವೇ?: ಸಚಿವ ಸಂಪುಟದಲ್ಲಿನ ನಿರ್ಧಾರದಂತೆ ಬಿಆರ್ಟಿಎಸ್ ಕಾರ್ಯಾಚರಣೆಯನ್ನು ವಾಯವ್ಯ ಸಾರಿಗೆ ಸಂಸ್ಥೆ ನಿರ್ವಹಿಸಲಿದ್ದು, ಇದಕ್ಕಾಗಿ ಪ್ರತ್ಯೇಕ ನಗರ ವಿಭಾಗ ಆರಂಭಿಸಬೇಕು, ಮೂರು ತಿಂಗಳ ನಂತರ ಸಾಧಕ-ಬಾಧಕ ಅವಲೋಕಿಸಿ ಪ್ರತ್ಯೇಕ ನಿಗಮ ಅಥವಾ ವಾಯವ್ಯ ಸಾರಿಗೆ ಸಂಸ್ಥೆ ಅಡಿಯಲ್ಲಿ ವಿಭಾಗವಾಗಿ ಮುಂದುವರಿಯುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟವಾಗಿ ಸೂಚಿಸಿತ್ತು. ಆದರೆ ಸಂಸ್ಥೆಯ ಲಾಭದ ದೃಷ್ಟಿಯಿಂದ ಪ್ರತ್ಯೇಕ ಕಾರ್ಪೊರೇಶನ್ ಆರಂಭಿಸಬೇಕು ಎನ್ನುವ ಉದ್ದೇಶದಿಂದ ನಗರ ವಿಭಾಗ ಸ್ಥಾಪನೆಗೆ ವಿಳಂಬ ಮಾಡಲಾಗಿದ್ದು, ಪರಿಣಾಮ ಹಣಕಾಸು ಇಲಾಖೆ ಅನುದಾನ ಪಾವತಿಗೆ ಕೊಕ್ಕೆ ಹಾಕಲಾಗಿದೆ ಎನ್ನಲಾಗಿದೆ.
ಪ್ರತ್ಯೇಕ ನಗರ ವಿಭಾಗ ಆರಂಭದ ಹೊರತಾಗಿ ಸರಕಾರದ ಪ್ರೋತ್ಸಾಹ ಧನ ಬರುವುದಿಲ್ಲ ಎಂದು ಮನವರಿಕೆಯಾದ ನಂತರವಷ್ಟೇ ನೂತನ ನಗರ ವಿಭಾಗಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮಾರ್ಚ್ ಮೊದಲ ವಾರದಲ್ಲಿ ಅಧಿಕೃತ ಮುದ್ರೆ ಒತ್ತಿದ್ದಾರೆ. ವಿಶೇಷಾಧಿಕಾರಿ ಹಾಗೂ ಸಹಾಯಕ ಆಡಳಿತಾಧಿಕಾರಿಗಳ ನೇಮಕ ಕೂಡ ಆಗಿದೆ. ಈ ಬೆಳವಣಿಗೆ ನಂತರ ಸಂಸ್ಥೆ ಅಧಿಕಾರಿಗಳು ಸರಕಾರಕ್ಕೆ ದಾಖಲೆಗಳನ್ನು ಸಲ್ಲಿಸುವ ಕಸರತ್ತು ನಡೆಸಿರುವಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಈ ಅನುದಾನ ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದೆ.
ತಮ್ಮ ಪಾಲಿನ ಹಣ ಪಡೆಯಲು ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಣದಿಂದ ನಿವೃತ್ತ ನೌಕರರಿಗೆ ಆರ್ಥಿಕ ಸೌಲಭ್ಯಸೇರಿದಂತೆ ಇತರೆ ಅವಶ್ಯಕತೆ ಪೂರೈಸಲು ಅನುಕೂಲವಾಗುತ್ತದೆ ಎನ್ನುವುದು ಸಂಸ್ಥೆಯ ಅಧಿಕಾರಿಗಳ ಲೆಕ್ಕಾಚಾರವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಟಾರ ಅವರು ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ.
• ಆರಂಭಿಕ ನಿರ್ವಹಣೆ ಅನುದಾನ ಮರೀಚಿಕೆ
•ಭರವಸೆಯಾಗೇ ಉಳಿದ ಮಾಸಿಕ 5 ಕೋಟಿ ನೆರವು
• ಐದು ತಿಂಗಳಾದ್ರೂ ಬಂದೇ ಇಲ್ಲ ಕವಡೆ ಕಾಸು
• 35 ಕೋಟಿ ರೂ. ಬಾಕಿಗಾಗಿ ಕಾದಿರುವ ಸಂಸ್ಥೆ
• ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದ ಅನುದಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ