ಕೊಯ್ನಾದಿಂದ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ
Team Udayavani, Apr 27, 2019, 12:03 PM IST
ಜಮಖಂಡಿ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಕನಿಷ್ಠ 5 ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿ ರೈತರು, ಹಿರಿಯ ನಾಗರಿಕರು, ರೈತಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೇಡ್-2 ತಹಶೀಲ್ದಾರ್ ಎಸ್.ಎಸ್. ನಾಯ್ಕಲಮಠ ಅವರಿಗೆ ಮನವಿ ಸಲ್ಲಿಸಿದರು.
ಉದ್ಯಮಿ ಸಂಗಮೇಶ ನಿರಾಣಿ ನೇತೃತ್ವದಲ್ಲಿ ಶುಕ್ರವಾರ ಎ.ಜಿ. ದೇಸಾಯಿ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮಿನಿವಿಧಾನಸೌಧ ಉಪವಿಭಾಗಾಧಿಕಾರಿ ಕಚೇರಿ ತಲುಪಿತು. ಸಂಗಮೇಶ ನಿರಾಣಿ ಮಾತನಾಡಿ, ಭೀಕರ ಬರಗಾಲದಿಂದ ನದಿ ಸಂಪೂರ್ಣ ಬತ್ತಿ ಹೋಗಿದೆ. ಕೆರೆ-ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ. ಜನರು ಹಾಗೂ ಜಾನುವಾರಗಳು ಬದುಕುವುದು ದುಸ್ತರವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ರಬಕವಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೀರು ಬಿಡಲು ಆಗ್ರಹಿಸಿದ್ದರೂ ಪ್ರಯೋಜನವಾಗಿಲ್ಲ. ಜನರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿ ಜಿ.ಕೆ.ಮಠದ, ಎಸ್.ಕೆ.ಪಾಟಿಲ, ಮಾದೇವಪ್ಪ ಇಟ್ಟಿ, ವರ್ಧಮಾನ ಯಲಗುದ್ರಿ, ಬಂಡು ಶಾಹ, ಕಲ್ಯಾಣಕುಮಾರ ಇಟ್ಟಿ, ಶ್ರೀಶೈಲ ಗುಂಡಗಿ, ಶಂಕರಗೌಡ ಪಾಟೀಲ, ಕಲ್ಲಪ್ಪ ಬಿರಾದಾರ, ಭರಮು ಉಳ್ಳಾಗಡ್ಡಿ, ಶಾಸಪ್ಪ ಉಳ್ಳಾಗಡ್ಡಿ, ರಾಯಪ್ಪ ಜಾಧವ, ಈಶ್ವರ ನ್ಯಾಮಗೌಡ, ಸುರೇಶ ಬನ್ನೂರ, ಎ.ಪಿ. ಬಾಹುಬಲಿ, ನರಸಿಂಹ ನಾಯಿಕ, ಕೊಣ್ಣೂರ, ಮರೇಗುದ್ದಿ ಗ್ರಾಮದ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.